ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ: ಬಿಎಸ್ವೈ ಬಲಗೈ ಬಂಟ

ತಮ್ಮ ಎಡಗೈ-ಬಲಗೈ ಎಲ್ಲಾ ಆಗಿರುವ ಸಿದ್ಲಿಂಗಸ್ವಾಮಿಗೆ ಟಿಕೆಟ್ ನೀಡುವ ಮೂಲಕ ಋಣ ತೀರಿಸುವ ಇಷ್ಟಾರ್ಥ ಯಡಿಯೂರಪ್ಪನವರಿಗೂ ಇದೆ. ಹಾಗಾಗಿ, ನಿರೀಕ್ಷೆಯಂತೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದು ಸಿದ್ಲಿಂಗಸ್ವಾಮಿ ಪ್ರಕಟಿಸಿದ್ದಾರೆ. ಕರ್ನಾಟಕ ಜನತಾ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿದ್ದಲಿಂಗಸ್ವಾಮಿ ಅವರ ಎದುರಾಳಿ ಬಹುಶಃ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗಬಹುದು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಈ ಬಾರಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ತಮ್ಮ ಸ್ಪರ್ಧೆ ಕುರಿತಂತೆ ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ಅರ್ಹತೆ ಇರುವವರೆಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಂವಿಧಾನದ ಅವಕಾಶ ಮಾಡಿಕೊಟ್ಟಿದೆ.
ಗೆಲ್ಲಲ್ಲೆಂದೇ ಸ್ಪರ್ಧಿಸುತ್ತಿದ್ದೇನೆ, ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ ಎಂದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ತಮಗೆ ಗೌರವವಿದೆ ಎಂದರು.
ಹಾವೇರಿ ಸಮಾವೇಶಕ್ಕೆ 30 ಸಾವಿರ ಜನರು:
ಚಾಮರಾಜನಗರದಿಂದ 10 ಸಾವಿರ ಹಾಗೂ ಮೈಸೂರು ಜಿಲ್ಲೆಯಿಂದ 20 ಸಾವಿರ ಸೇರಿದಂತೆ ಒಟ್ಟಾರೆ 30 ಸಾವಿರಕ್ಕೂ ಅಧಿಕ ಜನರು ಡಿ. 9ರ ಹಾವೇರಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಹೆಚ್ಚುವರಿ ರೈಲೊಂದನ್ನು ಓಡಿಸುವಂತೆ ಇಲಾಖೆಯನ್ನು ಕೋರಲಾಗಿದೆ.
ಮಾರ್ಗ ಮಧ್ಯೆ ಚಿತ್ರದುರ್ಗ ಮುರುಘಾಮಠ ಬೆಳಗ್ಗೆ ಮತ್ತು ಸಂಜೆ ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದರು. ಎಂ. ಅಪ್ಪಣ್ಣ, ಮಾಜಿ ಶಾಸಕ ಡಾ. ಎನ್.ಎಲ್. ಭಾರತೀಶಂಕರ್, ಎಚ್.ವಿ ರಾಜೀವ್, ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.












Click it and Unblock the Notifications