ಸಿದ್ದರಾಮಯ್ಯ,ಶ್ರೀರಾಮುಲು ಮಾತಿನ 'ಮಾರಾಮಾರಿ'

ಅವನೊಬ್ಬ ಕಳ್ಳ, ಅವರ ಜೊತೆಗಿರುವವರೂ ಕಳ್ಳರು, ಕಳ್ಳರೆಲ್ಲಾ ಸೇರಿ ಪಕ್ಷ ಕಟ್ಟಿದ್ದಾರೆ. ಹಾಗಾಗಿ ಶ್ರೀರಾಮುಲು ಅವರದ್ದು 'ಕಳ್ಳರ ಪಕ್ಷ' ಎಂದು ಸಿದ್ದರಾಮಯ್ಯ ಸ್ಪುಟ ಕನ್ನಡದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತ ಶ್ರೀರಾಮುಲು, ಸಿದ್ದರಾಮಯ್ಯ ಅವರೇನೂ ಸಾಚಾ ಅಲ್ಲ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತೆಲುಗು ಮಿಶ್ರಿತ ಕನ್ನಡದಲ್ಲಿ ಕಿಡಿಕಾರಿದ್ದಾರೆ.
'ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ' ಪಾದಯಾತ್ರೆಯ ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಬಳ್ಳಾರಿ ರೆಡ್ಡಿಗಳು ಪಕ್ಷ ಕಟ್ಟಿದ್ದೇ ನಾಡನ್ನು ಲೂಟಿ ಮಾಡಿದ ದುಡ್ಡಿನಿಂದ. ಭೂಗರ್ಭವನ್ನು ಅಗೆದು ಅಗೆದು ಒಬ್ಬರು ಜೈಲಿಗೆ ಸೇರಿದ್ದಾರೆ, ಮುಂದೆ ಸೇರುವವರೂ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡಿದ್ದಕ್ಕೆ 2ಜಿ, ಕಾಮವನ್ವೆಲ್ತ್ ಹಗರಣಗಳೇ ಸಾಕ್ಷಿ. ಮೊದಲು ತಾವು ಸರಿಯಿದ್ದರೆ ಇನ್ನೊಬ್ಬರ ಬಗ್ಗೆ ಮಾತನಾಡಲಿ ಎಂದು ಶ್ರೀರಾಮುಲು ಬಳ್ಳಾರಿಯಲ್ಲಿ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ್ದಾರೆ.
ಕೃಷ್ಣಾ ಸಮಸ್ಯೆಯಂತೆಯೇ ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆಯೂ ನಾವು ಹೋರಾಟ ಮಾಡಿದ್ದೇವೆ. ಕೃಷ್ಣಾ ಮತ್ತು ಕಾವೇರಿ ರಾಜ್ಯದ ಎರಡು ಕಣ್ಣುಗಳಿದ್ದಂತೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಯಾವುದೇ ಭಾಗದ ನೀರಾವರಿ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಮತದಾರರಿಗೆ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಭವಿಷ್ಯವಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಲಿದೆ. ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಲಿದೆ. ಹಾಗಾಗಿ ಸಿದ್ದರಾಮಯ್ಯ ನಮ್ಮ ಪಕ್ಷ ಸೇರಲು ಅವರಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇನೆ ಎಂದು ರಾಮುಲು ವ್ಯಂಗ್ಯವಾಡಿದ್ದಾರೆ.












Click it and Unblock the Notifications