ಕಾಂಗ್ರೆಸಿಗೆ 'ತೀರ್ಥಯಾತ್ರೆ'ಯ ತಿರುಮಂತ್ರ ನೀಡಿದ ಎಚ್ಡಿಕೆ

ಈ ಮೂಲಕ ಕಾಂಗ್ರೆಸ್ ಜೊತೆಜೊತೆಗೆ ರಾಜ್ಯ ರಾಜಕಾರಣ ಕಂಡ ಮಹಾನ್ ದೈವಭಕ್ತ ಮತ್ತು ಮಾಲೂರು ಬಿಜೆಪಿ ಶಾಸಕ ಕೃಷ್ಣಯ್ಯ ಶೆಟ್ರಿಗೂ ಜೆಡಿಎಸ್ ತಿರುಗೇಟು ನೀಡಿದೆ. ಸುಮಾರು 365 ಬಸ್ಸುಗಳಲ್ಲಿ 20 ಸಾವಿರ ಮಂದಿ ಗುರುವಾರ (ಜ 10) ಧರ್ಮಸ್ಥಳಕ್ಕೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಶಾಶ್ವತ ನೀರಿನ ಯೋಜನೆಗೆ ಪರಿಹಾರ ಸಿಗಲು ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿ ಪ್ರಾರ್ಥಿಸಲಿದ್ದೇವೆ. ಹಾಗೆಯೇ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಜಿಲ್ಲೆಯ ಜನತೆ ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಲಿದ್ದೇವೆ ಎಂದು ಮಾಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಕೋಡಿಹಳ್ಳಿ ಮಂಜುನಾಥ್ ಹೇಳಿದ್ದಾರೆ.
ಮಾಲೂರು ಜನತೆಗೆ ಕೃಷ್ಣಯ್ಯ ಶೆಟ್ಟಿ ದೇವರು, ದಿಂಡರು, ಲಡ್ಡು ಹೀಗೆಲ್ಲಾ ಅಭ್ಯಾಸ ಮಾಡಿಸಿ ಬಿಟ್ಟಿದ್ದಾರೆ. ಹಾಗಾಗಿ ನಾವು ತೀರ್ಥಯಾತ್ರೆ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ ಎಂದು ತೀರ್ಥಯಾತ್ರೆಗೆ ಚಾಲನೆ ನೀಡಿ ಅನಿತಾ ಕುಮಾರಸ್ವಾಮಿ ವಿಭಿನ್ನ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಪಕ್ಷಗಳ ಈ ಮೇಲಾಟದಲ್ಲಿ ಯಾರಿಗೆ ಲಾಭ ಆಯಿತೋ ಇಲ್ಲವೋ, ಮಾಲೂರು, ಕೋಲಾರದ ಜನರಿಗೆ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಲಾಭವಂತೂ ಖಂಡಿತಾ ಆಗಿದೆ.
ಧರ್ಮಸ್ಥಳದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಸಾಂಗವಾಗಿ ನಡೆದುಕೊಂಡು ಬರುತ್ತಿದೆ. 20 ಸಾವಿರ ಮಂದಿಗೆ ಹೆಚ್ಚುವರಿ ಊಟದ ವ್ಯವಸ್ಥೆ ಮಾಡಿ ಎಂದು ಜೆಡಿಎಸ್ ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿಗೆ ಮುಂಗಡವಾಗಿ ಕೇಳಿಕೊಂಡಿದೆಯೋ ಅಥವಾ ಆಡಳಿತ ಮಂಡಳಿ ವಾಹಿನಿಗಳಲ್ಲಿ ಬಂದ ವಾರ್ತೆಯ ಮೂಲಕ ತಾವೇ ಸಜ್ಜಾಗಿದ್ದಾರೋ ಎಂದು ತಿಳಿದು ಬಂದಿಲ್ಲ.
ಕೊನೇ ಮಾತು: ಧರ್ಮಸ್ಥಳಕ್ಕೆ ತೆರಳಿದ ಮಾಲೂರು, ಕೋಲಾರದ ನಾಗರಿಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಈ ರೀತಿಯ ಎಚ್ಚರಿಕೆ ನೀಡಿದರೆ ಆಶ್ಚರ್ಯ ಪಡುವಂತದ್ದೂ ಏನೂ ಇಲ್ಲ. ಅದೇನಂದರೆ
'ಒಂದು ವೇಳೆ ಅಪ್ಪಿತಪ್ಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಮಾತಿಗೆ ಕಟಿಬಿದ್ದು ಧರ್ಮಸ್ಥಳ ಮಂಜುನಾಥನ ಮುಂದೆ ನಿಮಗೇ ನಮ್ಮ ವೋಟು ಎಂದು ಆಣೆ ಪ್ರಮಾಣ ಬಿಟ್ಟೀರಾ. ಮಾತು ಬಿಡ ಮಂಜುನಾಥ ಕಾಸು ಬಿಡ ವೆಂಕಟೇಶ ಎನ್ನುವ ಧಾರ್ಮಿಕವಾಣಿ ನಿಮಗೇ ತಿಳಿದೇ ಇದೆ. ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ನಡೆದ ಆಣೆ ಪ್ರಮಾಣ ಪ್ರಹಸನ ನಿಮಗೆ ತಿಳಿದೇ ಇದೆ ಎಚ್ಚರ.. ಎಚ್ಚರ '












Click it and Unblock the Notifications