ಆತಂಕದಲ್ಲಿ ಕಾಲ್ ಸೆಂಟರ್ ಮಹಿಳಾ ಉದ್ಯೋಗಿಗಳು
ಇದಕ್ಕೆಲ್ಲ ಕಾರಣ ಕಳೆದ ತಿಂಗಳು ನಡೆದುಹೋದ ಭಯಾನಕ ರೇಪ್ ಅಂಡ್ ಮರ್ಡರ್ ಮತ್ತು ಕಳೆದ ವಾರ ಇಲ್ಲೇ ನೋಯ್ಡಾದಲ್ಲಿ ನಡೆದ ಭಯಾನಕ ರೇಪ್ ಅಂಡ್ ಮರ್ಡರ್. ಇದರಿಂದ ಮಹಿಳಾ ಉದ್ಯೋಗಿಗಳು ತೀವ್ರವಾಗಿ ಘಾಸಿಗೊಂಡಿದ್ದಾರೆ ಎಂದು ಅಸೋಚಾಮ್ ನಡೆಸಿದ ದಿಢೀರ್ ಸಮೀಕ್ಷೆಯಿಂದ ತಿಳಿದುಬಂದಿದೆ.
ಭಾರತದ ಈ ರಾಜಧಾನಿ ಪ್ರದೇಶದಲ್ಲಿ (National Capital Region) ಐಟಿ ಉದ್ಯಮ ಅದರಲ್ಲೂ ಬಿಪಿಒ ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಈ ಉದ್ಯೋಗಿಗಳು ಇತ್ತೀಚಿನ ಘಟನಾವಳಿಗಳಿಂದ ನಿಜಕ್ಕೂ ಅಧೀರರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Associated Chambers of Commerce and Industry of India ನಡೆಸಿದ ಈ ಸಮೀಕ್ಷೆಯಲ್ಲಿ ಐಟಿ ಉದ್ಯಮ ಅದರಲ್ಲೂ ಬಿಪಿಒ ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳಲ್ಲಿ ಮೂವರಿಗೆ ಒಬ್ಬರಂತೆ ಅನೇಕರು ಕೆಲಸ ಬಿಟ್ಟಿದ್ದಾರೆ ಅಥವಾ ಕೆಲಸದ ಅವಧಿಯನ್ನು ಕಡಿಮೆ ಮಾಡಿದ್ದಾರೆ. ಶೇ. 82 ಮಂದಿ ಮಹಿಳಾ ಉದ್ಯೋಗಿಗಳು ಸೂರ್ಯ ಮುಳುಗುತ್ತಿದ್ದಂತೆ ಕಚೇರಿಯಿಂದ ಹೊರನಡೆದು ಗೂಡು ಸೇರಿಕೊಳ್ಳುತ್ತಿದ್ದಾರೆ.
ಶೇ. 67 ಮಂದಿ ಹೇಳುವಂತೆ ಕೆಲಸ ಮಾಡುವ ಸ್ಥಳಗಳಲ್ಲಿ ಭದ್ರತೆಯ ವಾತಾವರಣವಾಗಲಿ ಸೌಹಾರ್ಧ ಪರಿಸ್ಥಿತಿಯಾಗಲಿ ನೆಲೆಸಿಲ್ಲವಂತೆ. ಇನ್ನು, ಮಹಿಳಾ ಉದ್ಯೋಗಿಗಳ ಪೋಷಕರಂತೂ ತಮ್ಮ ಮಗಳು ಕೆಲಸಕ್ಕೆ ಹೋಗುವುದಕ್ಕೆ ಸುತರಾಂ ಒಲ್ಲೆ ಎನ್ನುತ್ತಿದ್ದಾ. ಆ ದುಡ್ಡೂ ಬೇಡ, ಅದರ ಸಹವಾಸವೂ ಬೇಡ ಎನ್ನುತ್ತಿದ್ದಾರೆ.
ಸಂಬಳ ಕಡಿಮೆಯಾದರೂ ಪರವಾಗಿಲ್ಲ. ಬೆಳಗಿನ ಹೊತ್ತಿನಲ್ಲಿ ಯಾವುದಾದರೂ ಕೆಲಸಕ್ಕೆ ಹೋದರಾಯಿತು. ರಸ್ತೆಗಳಲ್ಲಿ ಜನ ಇರುತ್ತಾರೆ. ಹೇಗೋ ಧೈರ್ಯವಾಗಿ ಮನೆಗೆ ವಾಪಸಾಗಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುತ್ತಿದೆ ಸಮೀಕ್ಷೆ.