ಬೆದರಿಕೆಗೆ ಬಗ್ಗದ ಬಿಜೆಪಿಯಿಂದ ಚುನಾವಣಾ ಕಹಳೆ

ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ಶನಿವಾರ ನಡೆದ ಬಿಜೆಪಿ 'ಚಿಂತನ್ ಮಂಥನ್ ಬೈಠಕ್' ಮತ್ತು ಕೋರ್ ಕಮಿಟಿ ಸಭೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಜ.20ರಿಂದ 27ರವರೆಗೆ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸುವುದಾಗಿ ಹೇಳಿದ್ದಾರೆ. ಚುನಾವಣೆಗೆ ಈ ಕ್ಷಣದಿಂದಲೇ ಬಿಜೆಪಿ ಸಿದ್ಧತೆ ನಡೆಸುವುದು ನಿಶ್ಚಿತವಾಗಿದೆ.
ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್ ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ್ ಸಿಂಗ್, ಸುರೇಶ್ ಕುಮಾರ್, ರಾಮದಾಸ್, ಅರವಿಂದ್ ಲಿಂಬಾವಳಿ, ನಾರಾಯಣಸ್ವಾಮಿ, ಬೆಳ್ಳುಬ್ಬಿ, ಗೋವಿಂದ ಕಾರಜೋಳ, ಅಪ್ಪಚ್ಚು ರಂಜನ್, ಸಿಟಿ ರವಿ, ಕೋಟಾ ಶ್ರೀನಿವಾಸ್ ಪೂಜಾರಿ ಮುಂತಾದವರು ಭಾಗವಹಿಸಿದ್ದರು.
ಸಭೆಯಲ್ಲಿ, ಯಡಿಯೂರಪ್ಪ ಸರಕಾರ ಬೀಳಿಸಲು ಯತ್ನಿಸದರೆ ಯಾವ ತಂತ್ರ ರೂಪಿಸಬೇಕು, ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು, ಕೆಜೆಪಿಯನ್ನು ಬೆಂಬಲಿಸುತ್ತಿರುವ ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ಓಡಿಸಬೇಕು ಮುಂತಾದ ವಿಷಯ ಕುರಿತು ಸಾಕಷ್ಟು ಚರ್ಚೆ ನಡೆಸಲಾಯಿತು ಎಂದು ಪ್ರಹ್ಲಾದ್ ಜೋಶಿ ನುಡಿದರು.
ಇದೇ ಜ.10ರಂದು ಕಾರ್ಯಕರ್ತರ ಮಟ್ಟದ ವಿಶೇಷ ಸಮಾವೇಶ ನಡೆಸಲಾಗುವುದು. ಮೊದಲ ಹಂತದ ಪ್ರಚಾರ ಕಾರ್ಯವನ್ನು ಜ.20ರಿಂದ 27ರವರೆಗೆ ನಡೆಸಲಾಗುವುದು. ಜ.27ರಿಂದ ಫೆ.10ರವರೆಗೆ ಬೂತ್ ಮಟ್ಟದ ಸಮಾವೇಶ ಮಾಡಲಾಗುವುದು. ಫೆ.27ರಿಂದ ಮಾ.3ರವರೆಗೆ 5 ತಂಡಗಳು ಇಡೀ ರಾಜ್ಯದ ಪ್ರವಾಸ ಕೈಗೊಳ್ಳಲಿವೆ. ಈ ಪ್ರವಾಸದಲ್ಲಿ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಭಾಗಿಯಾಗಲಿದ್ದಾರೆ.
ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಸದಾನಂದ ಗೌಡ, ಆರ್ ಅಶೋಕ್ ಮತ್ತು ಅನಂತ್ ಕುಮಾರ್ ಅವರ ನೇತೃತ್ವದಲ್ಲಿ 5 ತಂಡಗಳು ಇಡೀ ಕರ್ನಾಟಕದಾದ್ಯಂತ ಸಂಚರಿಸಿ ಎಲ್ಲ 224 ಕ್ಷೇತ್ರಗಳಲ್ಲಿ ಮತ ಯಾಚಿಸಲಿವೆ. ನಂತರ ಮಾರ್ಚ್ 3ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಜಗದೀಶ್ ಶೆಟ್ಟರ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜೋಶಿ ಸ್ಪಷ್ಟಪಡಿಸಿದರು. ಈ ನಡುವೆ, ಯಡಿಯೂರಪ್ಪನವರ ಕೆಜೆಪಿಯೊಂದಿಗೆ ಗುರುತಿಸಿಕೊಂಡವರನ್ನು ಪ್ರಚಾರ ಕಾರ್ಯದಲ್ಲಿ ಸೇರಿಸಿಕೊಳ್ಳದಿರಲು ಕೂಡ ನಿಶ್ಚಯಿಸಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications