ಜ.5ಕ್ಕೆ ಬಿಜೆಪಿ ಶಾಸಕರ ಸರಣಿ ರಾಜೀನಾಮೆ?

ಕೆಜೆಪಿ ಮೊಟ್ಟಮೊದಲ ಕಾರ್ಯಕಾರಿಣಿ ಸಭೆ ಜ.4ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ನಗರದ ಖಾಸಗಿ ಹೊಟೇಲ್ನಲ್ಲಿ ನಡೆಯಲಿದೆ.
ಸುಮಾರು 35ಕ್ಕೂ ಅಧಿಕ ಬಿಜೆಪಿ ಶಾಸಕರಿಗೆ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಜಗದೀಶ್ ಶೆಟ್ಟರ್ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಗೆ ನಾಳೆ, ನಾಡಿದ್ದರಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ. ಈ ನಡುವೆ ಸಿದ್ದರಾಮಯ್ಯ, ಪರಮೇಶ್ವರ್ ಅವರಿಗೆ ಹೈ ಕಮಾಂಡ್ ಬುಲಾವ್ ಬಂದಿದ್ದರಿಂದ ಕಾಂಗ್ರೆಸ್ ನಲ್ಲೂ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಬಿಜೆಪಿ ನಾಯಕರು ಕೂಡಾ ಸಭೆ ಸೇರಿ ಚುನಾವಣೆ, ರಾಜ್ಯಾಧ್ಯಕ್ಷ ಸ್ಥಾನ, ಕೆಜೆಪಿ ವಿರುದ್ಧ ಪ್ರತಿತಂತ್ರ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಯಡಿಯೂರಪ್ಪ ಜತೆ ಗುರುತಿಸಿಕೊಂಡಿರುವ ಬಂಡುಕೋರ ಶಾಸಕರು ಕೂಡಾ ಶತಾಯ-ಗತಾಯ ಶೆಟ್ಟರ್ ಬಜೆಟ್ ಮಂಡಿಸಲು ಬಿಡಲೇಬಾರದು ಎಂದಿದ್ದಾರೆ.
ತಮ್ಮ ಬೆಂಬಲಿಗ ಶಾಸಕರಿಂದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಶೆಟ್ಟರ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಯಡಿಯೂರಪ್ಪ ಕಾರ್ಯತಂತ್ರ ಹೆಣೆದಿದ್ದಾರೆ.
ಇದಕ್ಕಾಗಿಯೇ ಖುದ್ದು ತಮ್ಮ ಆಪ್ತ 35ಕ್ಕೂ ಹೆಚ್ಚು ಶಾಸಕರು ಮತ್ತು ಸಚಿವರಿಗೆ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.
ಇನ್ನೊಂದೆಡೆ ಸ್ವತಃ ಯಡಿಯೂರಪ್ಪನವರೇ ತಮ್ಮ ಅತ್ಯಂತ ಆತ್ಮೀಯರೆನಿಸಿಕೊಂಡಿರುವ 20ಕ್ಕೂ ಹೆಚ್ಚು ಶಾಸಕರನ್ನು ದೂರವಾಣಿ ಮೂಲಕ ಮಾತುಕತೆ ನಡೆಸಿ ಬರಬೇಕೆಂದು ಮನವಿ ಮಾಡಿದ್ದಾರೆ.
ಕೆಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡರೆ ಶಿಸ್ತುಕ್ರಮ ಜರುಗಿಸುವುದಾಗಿ ಬಿಜೆಪಿ ಬೆದರಿಕೆ ಹಾಕಿದೆ. ಈಗಾಗಲೇ ಹಾವೇರಿಯ ಸಮಾವೇಶದಲ್ಲಿ ಪಾಲ್ಗೊಂಡ ಕೆಲವು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಲಾಗಿದೆ.
ಯಾರಿದ್ದಾರೆ ಬಿಸ್ ವೈ ಜೊತೆ?: ಶಾಸಕರಾದ ನೆಹರು ಓಲೇಕರ್, ಬಿ.ಪಿ.ಹರೀಶ್, ಸುರೇಶ್, ಹರತಾಳ ಹಾಲಪ್ಪ, ರಾಮಣ್ಣ ಲಮಾಣಿ, ಎಸ್ಐ ಚಿಕ್ಕನಗೌಡರ್, ಸುನೀಲ್ ವಲ್ಯಾಪುರೆ, ಬಸವರಾಜ ಪಾಟೀಲ್ ಅಟ್ಟೂರು, ಸುರೇಶ್ಗೌಡ ಬಿ.ಪಾಟೀಲ್, ಜಿ.ಶಿವಣ್ಣ, ಶ್ರೀಶೈಲಪ್ಪ ಬಿದರೂರು, ಸಚಿವರಾದ ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ಉಮೇಶ್ಕತ್ತಿ, ಬಸವರಾಜ ಬೊಮ್ಮಾಯಿ ಸೇರಿದಂತೆ ನಿಗಮ-ಮಂಡಳಿ ಅಧ್ಯಕ್ಷರು ಭಾಗವಹಿಸುವ ನಿರೀಕ್ಷೆ ಇದೆ.
* ಶನಿವಾರ ಯಾರು ರಾಜೀನಾಮೆ
* ನೆಹರು ಓಲೇಕರ್ (ಹಾವೇರಿ)
* ಬಿ.ಪಿ.ಹರೀಶ್ (ಹರಿಹರ)
* ಸುನೀಲ್ ವಲ್ಯಾಪುರೆ (ಚಿಂಚೋಳಿ)
* ಬಸವರಾಜ ಪಾಟೀಲ್ ಅಟ್ಟೂರು (ಬಸವ ಕಲ್ಯಾಣ)
* ಸುರೇಶ್ (ತರೀಕೆರೆ)
* ಹರತಾಳ್ ಹಾಲಪ್ಪ (ಸೊರಬ)
* ಎಸ್.ಐ.ಚಿಕ್ಕನಗೌಡರ್ (ಕುಂದಗೋಳ)
ಚುನಾವಣೆ ವೇಳೆಗೆ ರಾಜೀನಾಮೆ
* ಎಂ.ಪಿ.ರೇಣುಕಾಚಾರ್ಯ
* ಸಿ.ಎಂ.ಉದಾಸಿ
* ಶೋಭಾ ಕರಂದ್ಲಾಜೆ
* ಬಸವರಾಜ ಬೊಮ್ಮಾಯಿ
* ಮುರುಗೇಶ್ ನಿರಾಣಿ
* ಉಮೇಶ್ ಕತ್ತಿ
* ಜಿ.ಶಿವಣ್ಣ
* ಶ್ರೀಶೈಲಪ್ಪ ಬಿದರೂರು
* ಸುರೇಶ್ಗೌಡ ಬಿ.ಪಾಟೀಲ್
*ಮಾಡಾಳು ವಿರೂಪಾಕ್ಷಪ್ಪ
ಒಂದು ವೇಳೆ ಕೆಜೆಪಿ ಕಾರ್ಯಕಾರಿಣಿ ಸಭೆಗೆ 20ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದರೆ ಜಗದೀಶ್ ಶೆಟ್ಟರ್ ಸರ್ಕಾರ ಅಪಾಯಕ್ಕೆ ಸಿಲುಕುವುದು ಬಹುತೇಕ ಖಚಿತ.
ನಾಳೆ ಸಭೆಗೆ ಭಾಗವಹಿಸುವ ಎಲ್ಲ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಬಗ್ಗೆ ಈವರೆಗೂ ತೀರ್ಮಾನವಾಗಿಲ್ಲ. ಕೆಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ನಾಳೆಯ ಕೆಜೆಪಿ ಕಾರ್ಯಕಾರಿಣಿ ಸಭೆ ಬಿಜೆಪಿ ಸರ್ಕಾರದ ಹಣೆಬರಹವನ್ನು ತೀರ್ಮಾನಿಸುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications