ರೇಪ್ ವಿರೋಧಿಸಿ ಜ.3 ರಂದು ಭಾರತ ಬಂದ್

23 ವರ್ಷ ವಯಸ್ಸಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯ ಅಲಿಯಾಸ್ ಅಮಾನತ್ ಅಲಿಯಾಸ್ ದಾಮಿನಿ ಮುಂತಾದ ಹೆಸರಿನಿಂದ ಕರೆಯಲ್ಪಟ್ಟ ಸಂತ್ರಸ್ತೆಯ ದುರಂತ ಸಾವಿಗೆ ನ್ಯಾಯ ದೊರೆಕಿಸಿಕೊಡಲು ವಿವಿಧ ಸಂಘಟನೆಗಳು ಪಣ ತೊಟ್ಟಿವೆ.
ಕರ್ನಾಟಕದ ಪರಿಸ್ಥಿತಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU) ಗುರುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಪ್ರಕಟಿಸಿದೆ. ಗುರುವಾರ(ಜ.3) ನಡೆಯಬೇಕಿದ್ದ ಪರೀಕ್ಷೆಗಳನ್ನು ಜ.7 ಹಾಗೂ ಜ.21 ರಂದು ನಡೆಸಲಾಗುವುದು ಎಂದು ವಿಟಿಯು ಪ್ರಕಟಣೆ ತಿಳಿಸಿದೆ.
ಆದರೆ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ರಜೆ ಘೋಷಿಸುವ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಲಿದೆ. ಯಾವುದೇ ಖಾಸಗಿ ಸಂಸ್ಥೆಗಳು ಕೂಡಾ ರಜೆ ಘೋಷಿಸಿಲ್ಲ.
ಡಿ.16 ರಂದು ರಾತ್ರಿ ವೇಳೆ ಬಸ್ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 6 ಆರೋಪಿಗಳ ವಿರುದ್ಧ 1000 ಪುಟಗಳ ಚಾರ್ಚ್ ಶೀಟ್ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿವೆ.
ಬಂದ್ ಸಾಧ್ಯವೇ?: ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಧೈರ್ಯವಾಗಿ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಪರೋಕ್ಷವಾಗಿ ಸರ್ಕಾರದ ವಿರುದ್ಧ ದನಿ ಎತ್ತಿರುವ ವಿಪಕ್ಷಗಳು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿವೆ.
ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು, ದೆಹಲಿಯ ವಿವಿಗಳು ಭಾರತ್ ಬಂದ್ ಗೆ ಮುಂದಾಗಿದೆ. ರಾಜಕೀಯ ಪಕ್ಷಗಳ ಬೆಂಬಲ ಇಲ್ಲದಿರುವುದರಿಂದ ಸಂಪೂರ್ಣ ಬಂದ್ ನಿರೀಕ್ಷಿಸಲು ಸಾಧ್ಯವಿಲ್ಲ. ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು, ದೆಹಲಿಯ ವಿವಿಗಳು ಭಾರತ್ ಬಂದ್ ಗೆ ಮುಂದಾಗಿದೆ.
ಅಲ್ಲದೆ, ಬಂದ್ ರಾಜಕೀಯ ವಿಷಯವಾಗುವುದು ಅಥವಾ ಯಾವುದೇ ರಾಜಕೀಯ ಪಕ್ಷ ಬಂದ್ ಲಾಭ ಪಡೆಯುವುದು ಸಂಘಟನೆಗಳಿಗೆ ಬೇಡವಾಗಿದೆ. ಹೀಗಾಗಿ ಪಕ್ಷದ ಬ್ಯಾನರ್ ಇಲ್ಲದೆ ಬಂದ್ ನಲ್ಲಿ ಭಾಗವಹಿಸುವುದಾದರೆ ಮಾತ್ರ ಸ್ವಾಗತ ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.
ಯಾವುದೇ ರಾಜಕೀಯ ಪಕ್ಷಗಳ ಪ್ರತ್ಯಕ್ಷ ಬೆಂಬಲ ಇಲ್ಲದಿರುವುದರಿಂದ ಸಂಪೂರ್ಣ ಬಂದ್ ನಿರೀಕ್ಷಿಸಲು ಸಾಧ್ಯವಿಲ್ಲ. ಅತ್ಯಾಚಾರಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವ ಜೊತೆಗೆ ನ್ಯಾಯಾಲಯದಲ್ಲಿ ವಿಚಾರಣೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಭಾರತ್ ಬಂದ್ ಗೆ ಕರೆ ನೀಡಿರುವ ಸಂಘಟನೆಗಳು ಆಗ್ರಹಿಸಿವೆ. ಜ.3ರಿಂದ ಜಸ್ಟೀಸ್ ಜೆಎಸ್ ವರ್ಮ ಅವರ ಸಮಿತಿ ಮುಂದೆ ಈ ಪ್ರಕರಣ ವಿಚಾರಣೆಗೆ ಬರಲಿದೆ.












Click it and Unblock the Notifications