ತಪ್ಪು ಮಾಡಿದ್ದೇನೆ, ನೇಣಿಗೆ ಹಾಕಿ: ದೆಹಲಿ ಅತ್ಯಾಚಾರಿ

ಬಂಧಿತರನ್ನು ಕೋರ್ಟಿನಲ್ಲಿ ಹಾಜರುಪಡಿಸಿದಾಗ ಒಬ್ಬ ಆರೋಪಿ, ಹಣ್ಣು ಮಾರಾಟಗಾರ ಪವನ್ ಗುಪ್ತಾ ಎಂಬುವವನು ತಾನು ತಪ್ಪಿತಸ್ಥನಾಗಿದ್ದು, ತನ್ನನ್ನು ನೇಣಿಗೆ ಹಾಕಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾನೆ.
ಮತ್ತೊಬ್ಬ ಆರೋಪಿ ವಿನಯ್ ಶರ್ಮಾ ಎಂಬ ಜಿಮ್ ತರಬೇತುದಾರ ಹೇಳಿದ್ದೇನೆಂದರೆ 'ನಾವು ಯುವಕನನ್ನು ಮಾತ್ರ ಹೊಡೆದೆವು. ಆದರೆ ಯುವತಿಗೆ ಹೊಡೆಯಲಿಲ್ಲ' ಎಂದು ಕೋರ್ಟಿಗೆ ಹೇಳಿದ್ದಾನೆ.
ಬೆಳಗಿನ ಸುದ್ದಿ: ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ನಡೆದ ಪ್ರಕರಣವನ್ನು ಕೇಂದ್ರ ಸರಕಾರ ಗಂಭಿರವಾಗಿ ಪರಿಗಣಿಸಿದ್ದು, ಇಂದು ದೆಹಲಿಯಲ್ಲಿ ಉನ್ನತಾಧಿಕಾರಿಗಳ ಸಭೆ ಕರೆದಿದೆ.
* ಮಂಗಳವಾರ ರಾತ್ರಿ ಬಾಧಿತ ಯುವತಿಯನ್ನು ಭೇಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಯ ಹಸ್ತ ನೀಡಿದ್ದಾರೆ.
* 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ (ಬಾಧಿತ ಯುವತಿ) ದೇಹಸ್ಥಿತಿ ಇನ್ನೂ ಚಿಂತಾಜನಕ.
* ಅತ್ಯಾಚಾರ ಆರೋಪಿಗಳ ವಿರುದ್ಧ ಪೊಲೀಸರು ಇನ್ನೂ ಮೂರು (ಅತ್ಯಾಚಾರದ ಜತೆಗೆ ಹತ್ಯೆಗೆ ಯತ್ನ, ದರೋಡೆ, ಸಾಕ್ಷ್ಯನಾಶ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ತ್ವರಿತಗತಿಯ ವಿಚಾರಣಾ ಕೋರ್ಟ್ ಸ್ಥಾಪನೆಗೆ ಮನವಿ.
* ಸೆರೆ ಸಿಕ್ಕ ಆರೋಪಿಗಳ ಹೆಸರುಗಳು: ಡ್ರೈವರ್ ರಾಮ್ ಸಿಂಗ್, ಅವನ ಸೋದರ ಮುಕೇಶ್, ಜಿಮ್ ತರಬೇತುದಾರ ವಿನಯ್ ಶರ್ಮಾ ಮತ್ತು ಹಣ್ಣು ಮಾರಾಟಗಾರ ಪವನ್ ಗುಪ್ತಾ.
* ಇನ್ನೂ ಅಕ್ಷಯ್ ಠಾಕೂರ್ ಮತ್ತು ರಾಜು ಎಂಬಿಬ್ಬರು ನಾಪತ್ತೆ. ಒಟ್ಟು 6 ಮಂದಿಯಿಂದ ದುಷ್ಕೃತ್ಯ.
* ಆರೋಪಿಗಳನ್ನು ಇಂದು ಬುಧವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು.
* 'ಅಂತಹ ಹೇಯ ಕೃತ್ಯವೆಸಗಿದ್ದರೆ ನನ್ನ ಮಗನನ್ನು ನೇಣಿಗೆ ಹಾಕಿ' ಎಂದು ಆರೋಪಿ ವಿನಯ್ ಕುಮಾರನ ತಂದೆ ಅಲವತ್ತುಕೊಂಡಿದ್ದಾರೆ.
* ಪಾಪಿಗಳು ಆಕೆಯ ಗುಪ್ತಾಂಗದ ಮೂಲಕ ಕಬ್ಬಿಣದ ರಾಡ್ ತೂರಿಸಿದ್ದರಿಂದ ಆಕೆಯ ಕರುಳಿಗೆ ತೀವ್ರ ಹಾನಿ. ಇಂತಹ ಹೇಯ ಕೃತ್ಯ ಕಂಡೂ ಕೇಳಿಲ್ಲ - ಚಿಕಿತ್ಸೆ ನೀಡುತ್ತಿರುವ ವೈದ್ಯರ ಅನಿಸಿಕೆ
* ಬಸ್ ಹತ್ತಿದ ಯುವತಿಯನ್ನು ಉದ್ದೇಶಿಸಿ ದುರುಳರು 'ಏನು ಬಾಯ್ ಫ್ರೆಂಡ್ ಜತೆ ಹೋಗುತ್ತಿದ್ದೀಯಾ?' ಎಂದು ಅಸಭ್ಯವಾಗಿ ಮಾತನಾಡಿದ್ದಾರೆ. ಅದಕ್ಕೆ ಆಕೆ ಸರಿಯಾದ ಉತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ದುರುಳರು, ಯುವತಿಗೆ ತಕ್ಕ ಪಾಠ ಕಲಿಸಬೇಕೆಂದು ಪೈಶಾಚಿಕ ಕೃತ್ಯವೆಸಗಿದ್ದಾರೆ- ಪೊಲೀಸ್ ತನಿಖಾಧಿಕಾರಿ.
* ರೇಪ್ ಮಾಡಿದ ಬಳಿಕ ಪೊಲೀಸರಿಗೆ ತಾವು ಸಿಕ್ಕಿಹಾಕಿಕೊಳ್ಳುವುದಿಲ್ಲವೆಂಬ ಭಂಡ ಧೈರ್ಯದಿಂದ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದ ದುರುಳರು- ಪೊಲೀಸರ ಹೇಳಿಕೆ.












Click it and Unblock the Notifications