ಜೆಸಿಂತಾಗಾಗಿ ಕಂಬನಿ ಮಿಡಿದ ತುಳುನಾಡು
ಮಂಗಳೂರು, ಡಿ.17: ಲಂಡನ್ನಿನ ಕಿಂಗ್ ಎಡ್ವರ್ಡ್VII ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿರ್ವ ಮೂಲದ ಜೆಸಿಂತಾ ದುರಂತ ಅಂತ್ಯಕ್ಕೆ ಇಡೀ ತುಳುನಾಡು ಕಂಬನಿಗೆರೆದಿದೆ. ಜೆಸಿಂತಾ ಸಲ್ಡಾನಾ ಅವರ ಅಂತ್ಯಕ್ರಿಯೆ ಕ್ರೈಸ್ತ ಸಂಪ್ರದಾಯದಂತೆ ಸಂತ ಮೇರಿ ಚರ್ಚ್ ನಲ್ಲಿ ಸೋಮವಾರ (ಡಿ.17) ನೆರವೇರಿದೆ.
46 ವರ್ಷದ ಜೆಸಿಂತಾ ಎಡ್ನಾ ನೋರೊನ್ನಾ ಸಲ್ಡಾನಾ ಅವರ ಮೃತ ದೇಹ ಚರ್ಚ್ ಆವರಣದಲ್ಲಿ ಮಣ್ಣಾದರೂ, ಸಾವಿನ ನಿಗೂಢತೆ ಇನ್ನೂ ಮುಂದುವರೆದಿದೆ. ಈ ನಡುವೆ ಜೆಸಿಂತಾ ಅವರ ಮೃತದೇಹ ಅಂತಿಮ ದರ್ಶನಕ್ಕೆ ಸರ್ವಪ್ರಯತ್ನ ಪಟ್ಟು ವಿಫಲರಾದ ಸ್ಥಳೀಯ ಮಾಧ್ಯಮದವರು ಜೆಸಿಂತಾ ಕುಟುಂಬದ ಮನವಿಗೆ ಕೊನೆಗೂ ಬೆಲೆ ನೀಡಿದ್ದಾರೆ.

ಭಾನುವಾರ ಮುಂಬೈನಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಜೆಸಿಂತಾ ಶವವನ್ನು ಕರೆತರಲಾಗಿತ್ತು. ಜೆಸಿಂತಾ ಪತಿ ಬೆನಡಿಕ್ಟ್ ನೊರೊನ್ನಾ ಪುತ್ರ ಜುನಾಲ್ ಹಾಗೂ ಪುತ್ರಿ ಲಿಶಾ ಮತ್ತು ಸಂಬಂಧಿ ಸ್ಟೀವನ್ ಅಲ್ಮೇಡಾ ಈ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಕೆಎಂಸಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಸೋಮವಾರ ಮಣಿಪಾಲದಿಂದ ಶಿರ್ವದ ಮಂಚಕಲ್ಲು ಪೇಟೆಲ್ಲಿರುವ ಜೆಸಿಂತಾ ಪತಿ ಬೆನಡಿಕ್ಟ್ ಅವರ ಮನೆಗೆ ಸೋಮವಾರ (ಡಿ.17) 12.45ರ ಸುಮಾರಿಗೆ ಕರೆತರಲಾಯಿತು.
ಚರ್ಚ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಕರಾವಳಿಯ ಕ್ರೈಸ್ತ ಸಮುದಾಯ ಚರ್ಚ್ ಕಡೆಗೆ ಬಂದು ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 3.30ರ ಸುಮಾರಿಗೆ ಉಡುಪಿ ಪ್ರಾಂತ್ಯದ ಧರ್ಮಾಧ್ಯಕ್ಷ ರೆವಡೆಂಡ್ ಫಾದರ್ ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಚರ್ಚ್ ಧರ್ಮಗುರು ರೆ.ಫಾ ಸ್ಟಾನಿ ಥ್ರಾವೋ ಅವರು ಸಾಮೂಹಿಕ ಪ್ರಾರ್ಥನೆಗೆ ಚಾಲನೆ ನೀಡಿದರು.
ಸೂಸೈಡ್ ನೋಟ್ ನಿಗೂಢತೆ: ಜೆಸಿಂತಾ ಅವರು ಬರೆದಿರುವ ಮೂರು ಸೂಸೈಡ್ ಪತ್ರಗಳ ಪೈಕಿ ಒಂದರಲ್ಲಿ ತನ್ನ ಸಹದ್ಯೋಗಿಗಳ ಕಿರುಕುಳದ ಬಗ್ಗೆ ಹೇಳಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಆಸ್ಪತ್ರೆ ಅಧಿಕಾರಿಗಳು ಅಲ್ಲಗೆಳೆದಿದ್ದಾರೆ.
ಆಸ್ಪತ್ರೆಯ ಹಿರಿಯ ಸಿಬ್ಬಂದಿ ವರ್ಗ ಸೂಸೈಡ್ ನೋಟ್ ನೋಡಿಲ್ಲ. ಎಲ್ಲಾ ಪ್ರತಿಗಳು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ಬಳಿ ಇದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.
ರೇಡಿಯೋ ಜಾಕಿಗಳ ಕರೆ ನಂತರ ಆಸ್ಪತ್ರೆ ಸಿಬ್ಬಂದಿಗಳ ಕಿರುಕುಳಕ್ಕೆ ಜೆಸಿಂತಾ ಒಳಗಾಗಿರುವ ಸಾಧ್ಯತೆಯಿದೆ. ಹೀಗಾಗಿ ಘಟನೆ ನಡೆದ 72 ಗಂಟೆಗಳಲ್ಲಿ ಜೆಸಿಂತಾ ಮುರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ. 3 ಸೂಸೈಡ್ ನೋಟ್ ಸಿಕ್ಕಿರುವುದು ಇದನ್ನು ಪುಷ್ಟೀಕರಿಸುತ್ತದೆ ಎಂದು ಜೆಸಿಂತಾ ಕುಟುಂಬ ವರ್ಗ ಹೇಳಿದೆ. ಒಟ್ಟಾರೆ, ಸಾವಿನ ನಿಗೂಢತೆಯೊಂದಿಗೆ ಜೆಸಿಂತಾ ಚಿರವಿಶ್ರಾಂತಿ ಪಡೆದಿದ್ದಾರೆ. RIP Jacinta












Click it and Unblock the Notifications