ಬಿಎಸ್ವೈ ಮೂಲೆಗುಂಪು ಮಾಡಲು ಬಿಜೆಪಿ ಮಹಾನ್ ರಣತಂತ್ರ

ಹೊಸದಾಗಿ ಉದಯವಾಗಿರುವ ಕೆಜೆಪಿ ಪಕ್ಷವನ್ನು ಟಾರ್ಗೆಟ್ ಮಾಡುವ ಬದಲು, ಯಡಿಯೂರಪ್ಪ ಅವರನ್ನು, ಅವರು ಬಳಸಿಕೊಳ್ಳುತ್ತಿರುವ ಅಸ್ತ್ರಗಳಿಂದಲೇ ಮಟ್ಟ ಹಾಕಲು ಬಿಜೆಪಿ ನಾಯಕರುಗಳು ಕಾರ್ಯತಂತ್ರ ಹಣೆದಿದ್ದಾರೆ.
ಇದರ ಮೊದಲ ಭಾಗವಾಗಿ ಹಾವೇರಿ ಸಮಾವೇಶದಲ್ಲಿ ಭಾಗವಹಿಸಿದ 14 ಜನ ಯಡಿಯೂರಪ್ಪ ಬೆಂಬಲಿತ ಶಾಸಕರುಗಳಿಗೆ ಶೋಕಾಸ್ ನೀಡಲು ಸರ್ವ ಸನ್ನದ್ದವಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಆದರೆ ಗುಜರಾತ್ ಚುನಾವಣೆಯ ಫಲಿತಾಂಶ ಗುರುವಾರ (ಡಿ 20) ಪ್ರಕಟವಾಗಲಿರುವುದರಿಂದ ತುರ್ತಾಗಿ ಶೋಕಾಸ್ ನೋಟೀಸ್ ನೀಡದೇ ಇರಲು ನಿರ್ಧರಿಸಿದೆ.
ಗುಜರಾತ್ ನಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ನಂಬಿರುವ ಬಿಜೆಪಿ, ಫಲಿತಾಂಶ ಪಕ್ಷದ ಪರವಾಗಿ ಬಂದ ಕೂಡಲೇ ಬಿಎಸ್ವೈ ಬೆಂಬಲಿತ ಶಾಸಕರ ವಿರುದ್ದ ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಲು ನಿರ್ಧರಿಸಿದೆ.
ಯಡಿಯೂರಪ್ಪನವರ ಮೇಲಿನ ಸಿಟ್ಟನ್ನು ಶಾಸಕರುಗಳಿಗೆ ಶೋಕಾಸ್ ನೋಟೀಸ್ ನೀಡುವ ಮೂಲಕ ತೀರಿಸಿಕೊಳ್ಳಲು ಬಿಜೆಪಿ ಸಿದ್ದವಾದಂತಿದೆ.
ಲಿಂಗಾಯಿತ ಮತ್ತು ಉತ್ತರ ಕರ್ನಾಟಕ ಎಂಬ ಎರಡು ಅಸ್ತ್ರಗಳಿಂದ ಬಿಜೆಪಿಗೆ ಆಟವಾಡಿಸುತ್ತಿರುವ ಯಡಿಯೂರಪ್ಪನವರಿಗೆ ಇದೇ ಅಸ್ತ್ರದಿಂದ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಒಂದು ವೇಳೆ ಯಡಿಯೂರಪ್ಪ ಅತಿರೇಕದ ನಿರ್ಧಾರ ತೆಗೆದುಕೊಂಡು ಸರಕಾರ ಉರುಳಿಸಿದರೆ ಅದನ್ನೇ ಪ್ರಮುಖ ಅಸ್ತ್ರವಾಗಿರಿಸಿಕೊಂಡು ಯಡಿಯೂರಪ್ಪ ವಿರುದ್ದ ತಿರುಗಿ ಬೀಳಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
14 ಶಾಸಕರುಗಳಿಗೆ ಶೋಕಾಸ್ ನೋಟೀಸ್ ನೀಡಿ, ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಅವರ ರಾಜಕೀಯ ವಿರೋಧಿಗಳಿಗೆ ಮಣೆ ಹಾಕುವ ಮೂಲಕ ಅವರನ್ನು ಕಾರ್ಯಕರ್ತರಿಂದ ದೂರ ಮಾಡುವ ಕೆಲಸಕ್ಕೆ ಕೂಡಾ ಬಿಜೆಪಿ ಕೈಹಾಕಬಹುದು ಎನ್ನಲಾಗಿದೆ.












Click it and Unblock the Notifications