'ನಾನಿಲ್ದಿದ್ರೇನಂತೆ ನನ್ ಮಗನಾದ್ರೂ ಮುಖ್ಯಮಂತ್ರಿಯಾಗ್ಲಿ'
ಹೀಗೆಂದು ಹೇಳಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ತಾವೇ ಹಾರಿಸಿದ್ದ ಬಲೂನಿಗೆ ಮತ್ತೆ ಗಾಳಿ ತುಂಬಿದ್ದಾರೆ ಹುಕ್ಕೇರಿ (ಬೆಳಗಾವಿ ಜಿಲ್ಲೆ) ಶಾಸಕ ಕೃಷಿ ಸಚಿವ ಉಮೇಶ್ ವಿಶ್ವನಾಥ್ ಕತ್ತಿ. ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬ ಆಶೆಯೇನೋ ಇದೆ, ಅದಾಗದಿದ್ದರೆ ನನ್ನ ಮಗನಾದರೂ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಅವರು ಗುರುವಾರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಕಡೆಯ ದಿನ ಹೇಳಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಪ್ರಸ್ತಾಪವೆತ್ತಿ ಸಮಸ್ತ ಕನ್ನಡಿಗರ ಆಕ್ರೋಶಕ್ಕೆ ಉಮೇಶ್ ಕತ್ತಿ ಗುರಿಯಾಗಿದ್ದರು. ಕರ್ನಾಟಕವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಲ್ಲ ವಲಯಗಳಿಂದ ಕಿಡಿನುಡಿ ಕೇಳಿಬಂದಿತ್ತು. ಈಗ ಅದೇ ವಾದವನ್ನು ವಿಶ್ವನಾಥ್ ಶುಗರ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ನ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ ಆಗಿರುವ ಉಮೇಶ್ ಕತ್ತಿ ಮುಂದಿಟ್ಟಿದ್ದಾರೆ. ಮಹತ್ವಾಕಾಂಕ್ಷಿಯಾಗಿರುವ ಉಮೇಶ್ ಕತ್ತಿಯವರು 6 ಬಾರಿ ಹುಕ್ಕೇರಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜಾಪುರ, ಗುಲಬರ್ಗಾ, ಬೀದರ್, ಬೆಳಗಾವಿ, ಗೋವಾ ರಾಜ್ಯದ ಕೆಲ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಸೇರಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ವಾದವನ್ನು ಉಮೇಶ್ ಕತ್ತಿ ಮುಂದಿಟ್ಟಿದ್ದಾರೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟವೇನೂ ಮಾಡುವುದಿಲ್ಲ. ಆದರೆ, ಪ್ರತ್ಯೇಕ ರಾಜ್ಯ ಸ್ಥಾಪನೆಯಾಗಬೇಕೆನ್ನುವುದು ನನ್ನ ಕನಸುಗಳಲ್ಲೊಂದು ಎಂದು ಅವರು ಹೇಳಿಕೆ ನೀಡಿದ್ದರು.
ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಕೂಡ ಉತ್ತರ ಕರ್ನಾಟಕಕ್ಕೆ ಅನುಕೂಲವಾಗುಂತಹ ಯಾವುದೇ ಯೋಜನೆಯೂ ಅನುಷ್ಠಾನಗೊಂಡಿಲ್ಲ ಎಂಬ ಕೂಗು ಉತ್ತರ ಕರ್ನಾಟಕದ ಶಾಸಕರಿಂದ ಎದ್ದಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ನೀರಿನ ಬಳಕೆ ಕುರಿತಂತೆ ಸಾಕಷ್ಟು ಚರ್ಚೆ ನಡೆದರೂ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿಲ್ಲದಿರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಉಮೇಶ್ ಕತ್ತಿಯವರು ಪ್ರತ್ಯೇಕ ರಾಜ್ಯದ ಪ್ರಸ್ತಾಪ ಮಾಡಿ ಕಿಡಿಗೆ ತುಪ್ಪ ಸುರಿದಿದ್ದಾರೆ.