ವಿಧಾನಪರಿಷತ್ತಿನಲ್ಲಿ ಮಾರ್ದನಿಸಿದ ಡಿ.21ರ ಪ್ರಳಯ

ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಆರ್.ವಿ. ವೆಂಕಟೇಶ್ ಅವರು, ಡಿಸೆಂಬರ್ 21, 2012ರಂದು ಸಂಭವಿಸಲಿದೆ ಎಂದು ಹೇಳಲಾಗಿರುವ ಪ್ರಳಯದ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿವೆ. ಅಲ್ಲದೆ, ಇದು ಶ್ರೀಸಾಮಾನ್ಯರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನು ಬಲವಾಗಿ ಸಮರ್ಥಿಸಿಕೊಂಡ ಬಿಜೆಪಿಯ ವಿಧಾನಪರಿಷತ್ ಸದಸ್ಯ ವಸತಿ ಸಚಿವ ವಿ. ಸೋಮಣ್ಣ ಅವರು, ಪ್ರಳಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಇಲ್ಲಸಲ್ಲದ ಮಾಹಿತಿಗಳನ್ನು ಬಿತ್ತುತ್ತಿವೆ. ಇದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗದಂತೆ ತಡೆಹಿಡಿಯಬೇಕು ಮತ್ತು ಟಿವಿ ವಾಹಿನಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಅನೇಕ ಸದಸ್ಯರ ಬೆಂಬಲ ಕೂಡ ವ್ಯಕ್ತವಾಯಿತು. ಟಿವಿ ಕಾರ್ಯಕ್ರಮಗಳು ಗೊಂದಲ ಮಾತ್ರವಲ್ಲ ಜನರಲ್ಲಿ ಭಯವನ್ನೂ ಬಿತ್ತುತ್ತಿವೆ. ಒಂದು ವೇಳೆ ಟಿವಿ ವಾಹಿನಿಗಳು ಸ್ಪಂದಿಸದಿದ್ದರೆ ಅಂತಹ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೋಮಣ್ಣ ಒತ್ತಾಯಿಸಿದರು.
ಅನೇಕ ಟಿವಿ ವಾಹಿನಿಗಳು ಪ್ರತಿದಿನ ಪ್ರಳಯ ಕುರಿತು ನಾನಾ ಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಜ್ಯೋತಿಷಿಗಳನ್ನು, ವಿಜ್ಞಾನಿಗಳನ್ನು ಸ್ಟುಡಿಯೋಗೆ ಕರೆದುಕೊಂಡು ಬಂದು ಬಿಟ್ಟುಬಿಡದಂತೆ ಚರ್ಚೆ ನಡೆಸುತ್ತಿವೆ. ಮಾಯನ್ ಕ್ಯಾಲೆಂಡರ್ ಪ್ರಕಾರ ಡಿ.21ರಂದು ಪ್ರಳಯ ಆಗುತ್ತೋ, ಬಿಡುತ್ತೋ... ಆದರೆ, ಟಿವಿ ಕಾರ್ಯಕ್ರಮಗಳಿಂದಾಗಿ ಜನರು ಗೊಂದಲದಲ್ಲಿ ಸಿಲುಕಿರುವುದಂತು ನಿಜ.
ಒಂದು ವರದಿಯ ಪ್ರಕಾರ, ಪ್ರಳಯ ಕುರಿತಂತೆ ಸೂಕ್ತ ಸಲಹೆ ನೀಡುವುದಾಗಿ ಹೇಳಿ ಕೆಲ ಜ್ಯೋತಿಷಿಗಳು ಹಣ ಕಿತ್ತುಕೊಳ್ಳುತ್ತಿದ್ದಾರೆ. ಜೇಬನ್ನು ಕೂಡ ತುಂಬಿಸಿಕೊಳ್ಳುತ್ತಿದ್ದಾರೆ. ಜ್ಯೋತಿಷಿಗಳು ಜನರ ದಿಕ್ಕು ತಪ್ಪಿಸಬಾರದು, ಅವರಲ್ಲಿ ಸರಿಯಾದ ಮಾಹಿತಿ ನೀಡಿ ಸರಿದಾರಿಯಲ್ಲಿ ಸಾಗಲು ಸಲಹೆ ನೀಡಬೇಕು ಎಂದು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಜ್ಯೋತಿಷಿಗಳ ಸಮಾವೇಶದಲ್ಲಿ ವ್ಯಕ್ತವಾಗಿತ್ತು.












Click it and Unblock the Notifications