ಕತ್ತಿ ಗುರಾಣಿ ಇಲ್ಲದೆ ಯುದ್ಧಕ್ಕೆ ಹೊರಟ ಸೈನಿಕರು

ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮತ್ತು ದೆಹಲಿಯಲ್ಲಿ ಕುಳಿತಿರುವ ಹಿರಿಯ ಮುಖಂಡರು, ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ವಿರೋಧಿಗಳು ಕೂಡ ತಬ್ಬಿಬ್ಬಾಗುವಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾಗಿರುವುದು ಭಾರತೀಯ ಜನತಾ ಪಕ್ಷದ ನಾಯಕರ ಆತ್ಮವಿಶ್ವಾಸದ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ.
ಯಡಿಯೂರಪ್ಪನವರೇನೋ ಬಿಜೆಪಿ ಬಿಟ್ಟು ಹೋದರು, ಅವರ ಜೊತೆಗಿರುವವರು ಕೂಡ ತಾವೇ ಬಿಟ್ಟು ಹೋಗಲಿ, ನಾವೇಕೆ ಕ್ರಮ ತೆಗೆದುಕೊಂಡು ಅನಗತ್ಯ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕು, ಇದ್ದಷ್ಟು ದಿನ ಸರಕಾರ ನಡೆಯಲಿ, ಬೀಳಿಸಿದರೆ ಅವರೇ ಬೀಳಿಸಲಿ ಎಂಬ ಧೋರಣೆ ರಾಜ್ಯ ಬಿಜೆಪಿ ನಾಯಕರು ತಳೆದಿರುವುದು ಸುಸ್ಪಷ್ಟವಾಗಿದೆ.
ರಾಜ್ಯದ ನಾಯಕರಲ್ಲಿ ಸರಕಾರವನ್ನು ಉಳಿಸಿಕೊಳ್ಳುವ ವಿಶ್ವಾಸ ಇಲ್ಲದಿರುವುದು ಒಂದೆಡೆಯಾದರೆ, ವಿರೋಧಿಗಳನ್ನು ಸದೆಬಡಿಯಲೇಬೇಕೆಂಬ 'ಕಿಲ್ಲಿಂಗ್ ಇನ್ಸ್ಟಿಂಕ್ಟ್' ಮರೆಯಾಗಿರುವುದು ಬಿಜೆಪಿಯ ಮತ್ತೊಂದು ಮಗ್ಗುಲನ್ನು ತೆರೆದಿಟ್ಟಿದೆ. ಇದೆಲ್ಲದರ ಜೊತೆಗೆ ದೆಹಲಿಯಲ್ಲಿ ಕುಳಿತಿರುವ ಹಿರಿಯ ನಾಯಕರು ಕೂಡ ರಾಜ್ಯ ರಾಜಕಾರಣದ ಬಗ್ಗೆ ಅನಾದರ ತೋರಿಸುತ್ತಿರುವುದು ಸಮಸ್ಯೆಗಳನ್ನು ಬೆಂಗಳೂರಿನ ಕಸದ ರಾಶಿಯಂತೆ ಒಟ್ಟುಗೂಡಿಸಿದೆ.
ಬೆಳಗಾವಿಯಲ್ಲಿ ಬುಧವಾರ ನಡೆಯಬೇಕಾಗಿದ್ದ ಕೋರ್ ಕಮಿಟಿ ಸಭೆಗೆ ರಾಜ್ಯದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಕಡೇ ಗಳಿಗೆಯಲ್ಲಿ ರದ್ದುಗೊಳಿಸಿದಾಗಲೇ, ಕೋರ್ ಕಮಿಟಿ ಸಭೆ ಹೆಸರಿಗೆ ಮಾತ್ರ ಎಂಬುದು ಸಾಬೀತಾಗಿತ್ತು. ರಾಜ್ಯದ ಬಿಜೆಪಿ ನಾಯಕರಂತೂ ಕತ್ತಿ ಗುರಾಣಿ ಎರಡೂ ಇಲ್ಲದೆ ಯುದ್ಧಕ್ಕೆ ಹೊರಟ ಸೈನಿಕರಂತೆ ತೋರುತ್ತಿದ್ದಾರೆ.
ಸಾಲದೆಂಬಂತೆ, ಬಿಜೆಪಿ ನಾಯಕರು ಗಂಟೆಗೊಂದರಂತೆ ಹೇಳಿಕೆಗಳನ್ನು ನೀಡಿ ತಮ್ಮ ವೀಕ್ನೆಸ್ ಅನ್ನು ತಾವೇ ತೋರಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಬೆಂಬಲಿಗರಿಗೆ ನೋಟೀಸ್ ಹೋಗೇಬಿಡ್ತು, ಇನ್ನು ಅವರನ್ನು ಕಿತ್ತುಹಾಕುವುದೊಂದೇ ಬಾಕಿ ಎಂದು ಒಬ್ಬರು ಹೇಳುತ್ತಿದ್ದರೆ, ನೋಟೀಸ್ ನೀಡಿಕೆಯನ್ನು ಇನ್ನೂ ಎರಡು ದಿನ ಮುಂದೂಡಲಾಗಿದೆ ಎಂದು ಈಶ್ವರಪ್ಪ ಹೇಳಿ ತಮ್ಮ ಯುದ್ಧ ತಂತ್ರವನ್ನು ತಾವೇ ಅಡಗಿಸಿದರು.
ಈ ನಡುವೆ, ರಾಜ್ಯದ ಬೆಳವಣಿಗೆಗಳ ಬಗ್ಗೆ ಇಲ್ಲಿಗೆ ಬರದೆ ಅಲ್ಲಿಂದಲೇ ಎಲ್ಲ ವರದಿ ತರಿಸಿಕೊಂಡಿರುವ ಹಿರಿಯ ನಾಯಕರು, ನಿತಿನ್ ಗಡ್ಕರಿ ನೇತೃತ್ವದಲ್ಲಿ ಸಭೆ ನಡೆಸಿದೆ. ಕೋರ್ ಕಮಿಟಿ ಸಭೆಯಲ್ಲಿ ಗಡ್ಕರಿ ಜೊತೆ ಸುಷ್ಮಾ ಸ್ವರಾಜ್, ಧರ್ಮೇಂದ್ರ ಪ್ರಧಾನ್, ಅರುಣ್ ಜೇಟ್ಲಿ ಮುಂತಾದವರು ಮಾತುಕತೆ ನಡೆಸಿದ್ದಾರೆ. ಅವರಿಂದಲಾದರೂ ಗಟ್ಟಿ ನಿರ್ಧಾರ ಹೊರಬರುತ್ತದಾ? ಬಿಜೆಪಿ ಹೈಕಮಾಂಡ್ ಇತಿಹಾಸವನ್ನು ಗಮನಿಸಿದರೆ, ದಿಟ್ಟ ನಿರ್ಧಾರ ಇಷ್ಟು ಬೇಗನೆ ಬರುವುದು ಅನುಮಾನ.












Click it and Unblock the Notifications