ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ 15 ದಿನ ಗಡುವು
ಮೆಜೆಸ್ಟಿಕ್ನಿಂದ ಅಂಬೇಡ್ಕರ್ ವೀದಿಯವರೆಗೆ ಕೈಗೊಳ್ಳಲಾಗಿರುವ ನಮ್ಮ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿಗೆ ತೀವ್ರ ಅಡಚಣೆಯಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಬಿಎಂಆರ್ಸಿಎಲ್ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಎ.ವಿ. ಅಮರ್ನಾಥ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು..
ಆದರೆ, ದಲಿತ ಪರ ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಮೆಟ್ರೋ ಕಾಮಗಾರಿ ವಿಳಂಬದಿಂದ ಉಂಟಾಗುವ ನಷ್ಟದ ಬಗ್ಗೆ ಮಾಹಿತಿ ಪಡೆದ ನ್ಯಾ. ವಿಜೆ ಸೇನ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಮೇಲ್ಕಂಡ ತೀರ್ಪು ನೀಡಿದೆ.
ಅಂಬೇಡ್ಕರ್ ವೀದಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಪಂಡಿತ್ ಜವಾಹರ ಲಾಲ್ ನೆಹರೂ ಹಾಗೂ ಸ್ವಾತಂತ್ರ್ಯಯೋಧ ಸುಭಾಷ್ ಚಂದ್ರಬೋಸ್ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಂಬೇಡ್ಕರ್ ಅವರ್ ಪ್ರತಿಮೆ ಜೊತೆಗೆ ಇತರೆ ಪ್ರತಿಮೆಗಳ ಸ್ಥಳಾಂತರವೂ ಅನಿವಾರ್ಯವಾಗಿತ್ತು.
ಅಂಬೇಡ್ಕರ್ ವೀದಿಯಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ನೆಹರು ಹಾಗೂ ಸುಭಾಷ್ ಚಂದ್ರಬೋಸ್ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ದಲಿತ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೌನವಹಿಸಿತ್ತು.
ಪ್ರತಿಮೆ ಸ್ಥಳಾಂತರ ವಿಳಂಬದಿಂದ ಮೆಟ್ರೋ ಕಾಮಗಾರಿಗೆ ಅಡಚಣೆಯಾಗುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗುತ್ತಿದೆ. ಜತೆಗೆ, ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೂ ಅಡಚಣೆಯಾಗಿದೆ ಎಂದು ಅರ್ಜಿದಾರ ಅಮರನಾಥ್ ದೂರಿದ್ದರು.
ಅಂಬೇಡ್ಕರ್ ಪ್ರತಿಮೆ ಪುರಾತನ ಸ್ಮಾರಕವಲ್ಲ. ಕೆಲ ಸಂಘಟನೆಗಳು ಪ್ರತಿಮೆ ಸ್ಥಳಾಂತರ ಪ್ರಕರಣವನ್ನು ರಾಜಕೀಯಗೊಳಿಸುತ್ತಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು..
ಮೆಟ್ರೋ ಕಾಮಗಾರಿಯ ನೆಪವೊಡ್ಡಿ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಮಾಡದೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವಿಧಾನಸೌಧ ಮುಂಭಾಗದ ಪ್ರತಿಮೆ ಸ್ಥಳಾಂತರ ಮಾಡಿದರೆ ಉಗ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದರು.
ಒಂದು ವೇಳೆ ಅಂಬೇಡ್ಕರ್ ಬದುಕಿದ್ದರೆ, ಮೊದಲು ಈ ಪ್ರತಿಮೆ ಸ್ಥಳಾಂತರಿಸಿ ಎನ್ನುತ್ತಿದ್ದರು. ಮೊದಲು ದೇಶ, ನಂತರ ನಾವು ಎಂಬ ತತ್ವಾದರ್ಶಕ್ಕೆ ಅವರು ಬದ್ಧರಾಗಿದ್ದರು. ಈ ನಿಟ್ಟಿನಲ್ಲಿ ದಲಿತ ಮುಖಂಡರು ವಿಶಾಲ ಮನಸ್ಸಿನಿಂದ ಯೋಚಿಸಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು