ಸಿಎಂ ಆದ್ರೆ, 48 ಗಂಟೆಗಳಲ್ಲಿ ನೇತ್ರಾವತಿ ಹರಿಸುತ್ತೇನೆ

ಕುಡಿಯುವ ನೀರಿಗೂ ತತ್ವಾರವಾಗಿರುವ ಬಯಲುಸೀಮೆ ಪ್ರದೇಶಗಳಿಗೆ ಹೇಮಾವತಿ, ನೇತ್ರಾವತಿ ನೀರು ಹರಿಸುವ ಬಗ್ಗೆ ಅನೇಕಾನೇಕ ವರ್ಷಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.
ಈ ನಡುವೆ ನಾನೇನಾದ್ರೂ ಮತ್ತೊಮ್ಮೆ ಸಿಎಂ ಆದ್ರೆ ನಿಮ್ಮೂರಿಗೆ ನೇತ್ರಾವತಿ ನೀರು ಸಿಗುವುದು ಗ್ಯಾರಂಟಿ ಎಂದು ಕುಮಾರಸ್ವಾಮಿ ಅವರು ಮಟ ಮಟ ಮಧ್ಯಾಹ್ನ ಭರವಸೆ ನೀಡಿದ್ದಾರೆ.
ನೇತ್ರಾವತಿ ತಿರುವು ಯೋಜನೆಗೆ ಈಗಾಗಲೇ ಅನೇಕ ಗಣ್ಯರಿಂದ, ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿ ಸ್ಥಗಿತಗೊಂಡಿದೆ.
ಆದರೆ, ಕುಮಾರಸ್ವಾಮಿ ಅವರು ನೇತ್ರಾವತಿ ನದಿ ನೀರನ್ನು ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ತುಮಕೂರು ಹಾಗೂ ರಾಮನಗರದ ತನಕ ಹರಿಸುವ ಯೋಜನೆ ಜೆಡಿಎಸ್ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.
ಅತ್ತ ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲ ಅಧಿವೇಶನದಲ್ಲಿ ಜೆಡಿಎಸ್ ಶಾಸಕರು ಸದನದಲ್ಲಿ ಬಾವಿಗಿಳಿದು ಕಾವೇರಿಗಾಗಿ ಪ್ರತಿಭಟನೆ ನಡೆಸಿದ್ದಾರೆ.
ನೇತ್ರಾವತಿ ಯೋಜನೆ ಸ್ಥಿತಿ ಗತಿ: ನೇತ್ರಾವತಿ ತಿರುವು ಯೋಜನೆಗೆ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಅಸ್ತು ಎಂದಿದ್ದರು.
ಆದರೆ, ಪಶ್ಚಿಮ ಘಟ್ಟ ಚಿಕ್ಕಮಗಳೂರಿನ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಧರ್ಮಸ್ಥಳದ ಮೂಲಕ ಹರಿದು ಮಂಗಳೂರಿನ ಕಡಲು ಸೇರುವ ನೇತ್ರಾವತಿ ನದಿಯನ್ನು ತಿರುಗಿಸುವ ಯಾವುದೇ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ.
ಪಶ್ಚಿಮ ಘಟ್ಟವನ್ನು ಕೊರೆದು ಕಾಲುವೆ ಮಾಡಿ ನೀರನ್ನು ಘಟ್ಟ ಹತ್ತಿಸುವುದು ಸಮಂಜಸವಲ್ಲ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯಿಸಿದ್ದರು.
ಮಳೆಗಾಲದಲ್ಲಿ ಈ ನದಿಯ ನೀರನ್ನು ಸಂಗ್ರಹಿಸುವುದು ಅಗತ್ಯ. ಅದಕ್ಕಾಗಿ ಸಣ್ಣ ಸಣ್ಣ ಅಣೆಕಟ್ಟು ಗಳನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬೇಸಿಗೆಯಲ್ಲಿ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲ ಪರಿಹಾರ ಅಣೆಕಟ್ಟು ಮಾತ್ರ. ದೊಡ್ಡ ಅಣೆಕಟ್ಟುಗಳಿಗಿಂತ ಕಿರು-ಕಿಂಡಿ ಅಣೆಕಟ್ಟುಗಳೇ ಹೆಚ್ಚು ಸೂಕ್ತವಾಗಬಲ್ಲುದು ಮತ್ತು ಇವು ಕಡಿಮೆ ಖರ್ಚುದಾಯಕವೂ ಹೌದು
ನೇತ್ರಾವತಿ ತಿರುವು ಯೋಜನೆಯಿಂದ ಜಲಕ್ಷಾಮ ಎದುರಿಸಬೇಕಾಗುತ್ತದೆ. ಅಪಾರ ಪ್ರಮಾಣದಲ್ಲಿ ಜಲಚರಗಳು ನಾಶವಾಗುತ್ತದೆ, ಜನ ಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದರು.
ಆದರೆ, ನದಿ ತಿರುವು ಯೋಜನೆಗೆ ಮತ್ತೊಂದು ಹೆಸರಿಟ್ಟು 250 ಕೋಟಿ ರು ವೆಚ್ಚದಲ್ಲಿ ಸರ್ಕಾರ ಯೋಜನೆ ಸಾಕಾರಗೊಳಿಸಲು ಮುಂದಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.












Click it and Unblock the Notifications