ಜನಾರ್ದನ ರೆಡ್ಡಿ ವಿರುದ್ಧ ತೆಲುಗು ಸಿನಿಮಾ ರಿಲೀಸ್

ಅದಕ್ಕೂ ನಮ್ಮ ರೆಡ್ಡಿಗೂ ಏನಪ್ಪಾ ಸಂಬಂಧ ಎನ್ನುತ್ತಿರುವಾಗಲೇ ಆ ಸಿನಿಮಾದಲ್ಲಿ ಜನಾರ್ದನ ರೆಡ್ಡಿಯ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಗುರಿಯಾಗಿಸಿಕೊಂಡು ಚಿತ್ರ ಮಾಡಲಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಬಳ್ಳಾರಿ ಮತ್ತು ಬಳ್ಳಾರಿ ತೆಲುಗು ಢಾಳಾಗಿ ಬಳಕೆಯಾಗಿದೆ.
ಕ್ರಿಷ್ ನಿರ್ದೇಶಕತ್ವದಲ್ಲಿ ದಗ್ಗುಬಾಟಿ ರಾಣಾ ಮತ್ತು ನಯನತಾರಾ ತಾರಾಗಣದಲ್ಲಿರುವ 'ಕೃಷ್ಣಂ ವಂದೇ ಜಗದ್ಗುರುಂ' ಎಂಬ ಚಿತ್ರ ಆಂಧ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲ ಸೆಂಟರುಗಳಲ್ಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ ಹೀರೋ ದಗ್ಗುಬಾಟಿ ರಾಣಾ 'ರೆಡ್ಡಪ್ಪ' ಎಂಬ ವ್ಯಕ್ತಿಯ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಾನೆ. ಇದು ಕರ್ನಾಟಕದ 'ರೆಡ್ಡಪ್ಪ' ಜನಾರ್ದನ ರೆಡ್ಡಿಯ ಸುತ್ತ ಹೆಣೆಯಲಾದ ಪಾತ್ರ ಎಂದು ಚಿತ್ರ ನೋಡಿದವರು ಹೇಳುತ್ತಿದ್ದಾರೆ.
'ರೆಡ್ಡಪ್ಪ' ಕಥಾನಾಯಕ ದಗ್ಗುಬಾಟಿ ರಾಣಾನ ಸೋದರಮಾವ. 'ತನ್ನ ಮಾವ ಅಕ್ರಮ ಗಣಿಗಾರಿಕೆಯಿಂದ ಕೋಟ್ಯಂತರ ರೂಪಾಯಿ ಗಳಿಸಿದ್ದಾನೆ' ಎಂದು ಹೀರೋ 'ರೆಡ್ಡಪ್ಪ'ನ ವಿರುದ್ಧ ಸೆಟೆದು ನಿಲ್ಲುತ್ತಾನೆ.
'ಅಕ್ರಮವಾಗಿ ಲಕ್ಷಾಂತರ ಕೋಟಿ ರೂಪಾಯಿ ಗುಡ್ಡೆ ಹಾಕುವ ರಾಜಕಾರಣಿಗಳನ್ನು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ' ಎಂದು ಚಿತ್ರದಲ್ಲಿ ಪಾತ್ರಧಾರಿಯೊಬ್ಬ ಪ್ರಲಾಪಿಸುವ ಸಂದರ್ಭವೂ ಇದೆ.
ಆದರೆ ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಕ್ರಿಷ್ 'ಈ ಸಿನಿಮಾ ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ತೆಗದಿರುವುದಲ್ಲ. ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಮಧ್ಯೆ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಅಷ್ಟೆ' ಎಂದು ಜಾರಿಕೊಂಡಿದ್ದಾರೆ.
'ರೆಡ್ಡಪ್ಪ' ಕಥಾನಾಯಕ ದಗ್ಗುಬಾಟಿ ರಾಣಾನ ಹೆಸರು 'ಬಳ್ಳಾರಿ ಬಾಬು' ಎಂದೂ ಹೆಸರಿಸಲಾಗಿದೆ. ಇನ್ನು ಕಥಾನಾಯಕಿ ನಯನ ತಾರಾ ಓರ್ವ ಪತ್ರಕರ್ತೆ. 'ಕೃಷ್ಣಂ ವಂದೇ ಜಗದ್ಗುರುಂ' ಆಂಧ್ರದಲ್ಲಿ ಭರ್ಜರಿಯಾಗಿ ಓಡುತ್ತಿದೆ.












Click it and Unblock the Notifications