ಬಿಎಸ್ವೈ ಸುತ್ತ ವಿಷಜಂತುಗಳಿವೆ : ಸದಾನಂದ ಗೌಡ

ಹೀಗೆಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪಬ್ಲಿಕ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ, ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಎತ್ತರಕ್ಕೆ ಏರಿಸಿದ್ದು, ಅವರು ತಮ್ಮ ಸುತ್ತಲೇ ಹುತ್ತ ಕಟ್ಟಿಕೊಂಡಿದ್ದು, ಮತ ಹಾಕಿದ ಜನ ಕ್ಷಮಿಸಲಾರದಷ್ಟು ತಪ್ಪುಗಳನ್ನು ಪಕ್ಷ ಎಸಗಿದ್ದು ಮತ್ತು ಮುಂದಿನ ಚುನಾವಣಾ ಕಾರ್ಯತಂತ್ರದ ಬಗ್ಗೆ ಮುಕ್ತವಾಗಿ ಮನಸ್ಸನ್ನು ಹರಿಯಬಿಟ್ಟಿದ್ದಾರೆ ಮತ್ತು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆಯದಿದ್ದಾಗ ಯಡಿಯೂರಪ್ಪನವರ ಅಣತಿಯಂತೆ ಆಪರೇಷನ್ ಕಮಲ ಮಾಡಿದ್ದು ಸರಿಯಾಗಿದ್ದರೂ, ಅದನ್ನು ಮುಂದುವರಿಯಲು ಬಿಟ್ಟಿದ್ದು ನಾವು ಮಾಡಿದ ದೊಡ್ಡ ತಪ್ಪು. ಆ ಹಂತದಲ್ಲಿ ಆಪರೇಷನ್ ಕಮಲವನ್ನು ನಿಯಂತ್ರಣದಲ್ಲಿಡಲು ಏನು ಮಾಡಬೇಕಿತ್ತೋ ಅದನ್ನು ಫ್ರಂಟ್ ಲೈನ್ ಲೀಡರ್ಸ್ ಮಾಡಲಿಲ್ಲ. ಈ ತಪ್ಪನ್ನು ನಾವು ಒಪ್ಪಿಕೊಳ್ಳಲೇಬೇಕು. ಆ ತಪ್ಪಿನ ಫಲಿತಾಂಶವನ್ನು ನಾವು ಇಂದು ಎದುರಿಸುತ್ತಿದ್ದೇವೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಸಣ್ಣಪುಟ್ಟ ಕ್ಷಮೆಗೆ ಪಕ್ಷ ಅರ್ಹವಲ್ಲ : ಒಂದು ವೇಳೆ ಸ್ಪಷ್ಟ ಮೆಜಾರಿಟಿ ಸಿಕ್ಕಿದ್ದರೆ ಪಕ್ಷದಲ್ಲಿ ಇಷ್ಟು ಭ್ರಷ್ಟಾಚಾರ ಖಂಡಿತ ಇರುತ್ತಿರಲಿಲ್ಲ ಮತ್ತು ಯಡಿಯೂರಪ್ಪ ಪಕ್ಷದಲ್ಲೇ ಇರುತ್ತಿದ್ದರು. ಆದರೆ, ಆಂತರಿಕ ಜಗಳದಿಂದ ನಾವು ಮತದಾರರ ಮನಸ್ಸಿನಿಂದ ಸ್ವಲ್ಪಮಟ್ಟಿಗೆ ದೂರ ಹೋಗಿದ್ದೇವೆ. ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಲ್ಲ ಎಂಬ ನಿರ್ಣಯಕ್ಕೆ ಮತದಾರರು ಬಂದುಬಿಟ್ಟಿದ್ದಾರೆ. ಸಣ್ಣಪುಟ್ಟ ಕ್ಷಮೆಗೆ ಪಕ್ಷ ಅರ್ಹವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮಗಾಗಿ ದುಡಿದ ಬಿಜೆಪಿ ಕಾರ್ಯಕರ್ತರು ನಮ್ನ್ನು ಕ್ಷಮಿಸುವುದಿಲ್ಲ ಎಂದು ಅವರು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದರು.
ಯಡಿಯೂರಪ್ಪನವರನ್ನು ಏಕವ್ಯಕ್ತಿಚಕ್ರಾಧಿಪತಿಯಾಗಿ ಬೆಳೆಸಿದ್ದು ನಮ್ಮ ಬಹುದೊಡ್ಡ ತಪ್ಪು. ಅವರಿಗೆ ಜೈಕಾರ ಹಾಕಿ ಪಂಪ್ ಹೊಡೆದವರು ಸಾಕಷ್ಟು ಲಾಭ ಗಳಿಸಿದರು. ಇಂಥ ವಿಷವರ್ತುಲವನ್ನು ಸೃಷ್ಟಿಸಿಕೊಂಡಿದ್ದು ಮತ್ತು ಬಹುಪರಾಕ್ ಹೇಳುತ್ತಲೇ ಲಾಭ ಮಾಡಿಕೊಳ್ಳುವ ಸಮಯಸಾಧಕರನ್ನು ಬೆಳೆಸಿದವರೇ ಯಡಿಯೂರಪ್ಪನವರು. ಮುಂದೆ ಕೂಡ ಇಂಥ ಪಂಪ್ ಹೊಡೆಯುವವರು ಇದ್ದೇ ಇರುತ್ತಾರೆ. ಆದರೆ, ಪಂಪ್ ಹೊಡೆಸಿಕೊಳ್ಳುವವರ ಸಂಖ್ಯೆ ಕಡಿಮೆ ಮಾಡಬೇಕಾಗಿದೆ ಎಂದು ಡಿವಿಎಸ್ ಎಚ್ಚರಿಕೆಯ ನುಡಿಗಳನ್ನು ಹೇಳಿದರು.
ಎತ್ತರಕ್ಕೆತ್ತರಕ್ಕೆ ಬೆಳೆದಂತೆಲ್ಲ ಯಡಿಯೂರಪ್ಪನವರು ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ನೀತಿಯನ್ನು ಗಾಳಿಗೆ ತೂರಿದರು. ವಿಪರೀತ ಹಠಮಾರಿ ಸ್ವಭಾವದವರುಳ್ಳ ಅವರು ಸ್ವಹಿತಕ್ಕಾಗಿ ಮತ್ತು ಕೆಲವರನ್ನು ದೂರವಿಡಲು ದ್ವೇಷಸಾಧನೆಗೆ ಇಳಿಯುತ್ತಾ ಬಂದರು. ಅದರಲ್ಲೂ ಕುಮಾರಸ್ವಾಮಿ ಜೊತೆ ಕೈಜೋಡಿಸಿದ ಮೇಲೆ ವಿಪರೀತ ಸ್ವಾರ್ಥಿಗಳಾಗುತ್ತ ಬಂದರು. ಅವರು ದೊಡ್ಡದಾಗಿ ಬೆಳೆಯಲು ಅನೇಕ ಅವಕಾಶಗಳು ಕೂಡ ಕೂಡಿಬಂದವು. ಆದರೆ, ಕೆಜೆಪಿಯಲ್ಲಿ ಅವರಿಗೆ ಅಂತಹ ಅವಕಾಶವೇ ಇಲ್ಲ ಎಂದು ಸದಾನಂದ ಗೌಡರು ಯಡಿಯೂರಪ್ಪನವರ ವ್ಯಕ್ತಿತ್ವವನ್ನು ಬಿಡಿಸುತ್ತಾ ಹೋದರು.
ಮುಖ್ಯಮಂತ್ರಿಯಾಗಲು ಅವರೊಬ್ಬರೇ ಕಾರಣರಲ್ಲ : ಬಿಜೆಪಿ ಕುಮಾರಸ್ವಾಮಿ ಜೊತೆ ಕೈಜೋಡಿಸಿದ್ದು ವರದಾನವೇ ಎಂದು ಹೇಳಬೇಕು. ಮುಂದೆ ಅಧಿಕಾರಕ್ಕೆ ಬರಲು ಅನೇಕರು ದುಡಿದಿದ್ದಾರೆ ಯಡಿಯೂರಪ್ಪನವರೊಬ್ಬರೇ ಅಲ್ಲ. ಮುಂದೆ ನಾನು ಮುಖ್ಯಮಂತ್ರಿಯಾದಾಗ ಕೂಡ ಯಡಿಯೂರಪ್ಪ ಪ್ರಮುಖ ಪಾತ್ರವಹಿಸಿದ್ದರು, ಆದರೆ ಅವರೇ ಕಾರಣರಲ್ಲ. ಮುಂದೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸುವಾಗ ಮಾತ್ರ ಅವರೇ ಪ್ರಮುಖ ಪಾತ್ರವಹಿಸಿದರು. ಸಿಕ್ಕ ಅಧಿಕಾರವನ್ನು ದುರ್ಬಳಸಿಕೊಂಡು ಯಡಿಯೂರಪ್ಪನವರು ಜಾತಿ ರಾಜಕಾರಣ ಮಾಡುತ್ತ ಬಂದರು. ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಅವರು ನುಡಿದರು.
ಆದರೆ ಮುಂದೇನು ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಸ್ಪಷ್ಟವಾದ ಉತ್ತರವಿದೆ. ಯಡಿಯೂರಪ್ಪ ಕೆಜೆಪಿಗೆ ಹೋಗಿದ್ದರಿಂದ ಬಿಜೆಪಿಯ ಟಾಪ್ ಫ್ಲೋರ್ ನಡುಗುತ್ತಿರಬಹುದು. ಆದರೆ, ಅದರ ಬೇಸ್ ಇನ್ನೂ ಗಟ್ಟಿಯಾಗಿಯೇ ಇದೆ. ಬಿಎಸ್ವೈ ಪಕ್ಷ ಬಿಟ್ಟಿದ್ದರಿಂದ ಅವರು ಅಶಕ್ತರಾಗಿದ್ದಾರೆ. ವಿರೋಧಿಗಳ ಅಶಕ್ತತೆಯೇ ನಮ್ಮ ಬಲ. ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಹೋಗುವುದಾಗಿ ಅನೇಕರು ಹೇಳುತ್ತಿದ್ದರೂ ಅದನ್ನು ನಮ್ಮ ವೀಕ್ನೆಸ್ ಎಂದು ತಿಳಿಯಬಾರದು. ಸೂಕ್ತ ಸಮಯದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಖಂಡಿತ ಜರುಗಿಸುತ್ತೇವೆ. ಆಗಲಾದರೂ ಶೇ.5ರಷ್ಟು ಜನರಾದರೂ ನಮ್ಮನ್ನು ನಂಬಲು ಸಾಧ್ಯ ಎಂದು ಅವರು ತಮ್ಮ ಚಿಂತನೆಯನ್ನು ಹರಿಯಬಿಟ್ಟರು.












Click it and Unblock the Notifications