ಕೆಜೆಪಿಗೆ 50 ಶಾಸಕರಲ್ಲ 5 ಶಾಸಕರೂ ಹೋಗಲ್ಲ

ಬಿಜೆಪಿ ಬಿಡುವುದು ಯಡಿಯೂರಪ್ಪ ಅವರ ವೈಯಕ್ತಿಕ ವಿಚಾರ. ಸಾವಿರಾರು ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ ಒಂದೇ ಸಾರಿಗೆ ಬೀಳಿಸಲು ಸಾಧ್ಯವಿಲ್ಲ.
ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಬಿಎಸ್ ಯಡಿಯೂರಪ್ಪ ಅವರದ್ದು ದೊಡ್ಡ ಪಾಲು ಇದೆ ನಿಜ. ಅವರೇ ಕಟ್ಟಿದ ಕನಸನ್ನು ಅವರೇ ನುಚ್ಚು ನೂರು ಮಾಡಿ ಹೋಗುವುದು ಸರಿಯಲ್ಲ. ಅವರು ಬಿಜೆಪಿಯಲ್ಲೇ ಉಳಿದರೆ ಸಂತೋಷ. ಆದರೆ, ಈಗ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಸಚಿವ ಸುರೇಶ್ ಹೇಳಿದರು.
ಬಿಎಂಟಿಎಫ್ ತನಿಖೆ ನಡೆಸಲಿ: ಲಗ್ಗೆರೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ಕಚೇರಿ ಕೇಳಿದ ಮಾಹಿತಿಗೆ ಉತ್ತರಿಸಿದ್ದೇನೆ. ಬಿಎಂಟಿಎಫ್ ಅಧಿಕಾರ ಮೊಟಕುಗೊಳಿಸಲು ಅಥವಾ ಪ್ರಕರಣ ಮುಚ್ಚಿ ಹಾಕಲು ಎಂದೂ ಯತ್ನಿಸಿಲ್ಲ.
ನನ್ನ ಪರ ಯಾವ ಅಧಿಕಾರಿಗಳು ವಕಾಲತ್ತು ವಹಿಸುತ್ತಿಲ್ಲ. ಬಿಎಂಟಿಎಫ್ ತನಿಖೆಗೆ ನಾನು ಅಡ್ಡಿಪಡಿಸುವುದಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಲಗ್ಗೆರೆ ಬಳಿ ಇರುವ ಸರ್ವೆ ನಂ. 9/2 ಆರೆಸ್ಸೆಸ್ ಮುಖಂಡ ಮಾಜಿ ಎಂಎಲ್ ಸಿ ನರಹರಿ ಎಂಬುವರ ಸೋದರ ಗೋಪಿನಾಥ್ ಅವರಿಗೆ ಸೇರಿದೆ.
ಸದರಿ 4.2 ಎಕರೆ ಜಮೀನನ್ನು ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸುವ ಸಲುವಾಗಿ 1982ರಲ್ಲಿ ಡಿನೋಟಿಫೈ ಮಾಡಲಾಗಿತ್ತು. 2003ರಲ್ಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. 6 ವರ್ಷ ನಂತರ ಸ್ಲಂ ಬೋರ್ಡ್(Karnataka Slum Development Board (KSDB)) ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿತ್ತು.
ಆದರೆ, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಕಾಲದಲ್ಲಿ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಪಿನಾಥ್ ಅವರಿಗೆ ಅನುಕೂಲವಾಗುವಂತೆ ಡಿನೋಟಿಫೈ ಮಾಡಿದ ಸರ್ಕಾರದ ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶಕ್ಕೆ ಕಾನೂನು ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾನೂನು ಸಚಿವ ಸುರೇಶ್ ಕುಮಾರ್ ಅವರು ಅಕೌಂಟ್ ಜನರಲ್(AG) ಒಪ್ಪಿಗೆ ಸಿಕ್ಕಿದೆ ಎಂಬ ಕಾರಣ ಕೊಟ್ಟು ಡಿನೋಟಿಫೈ ಮಾಡಿದ್ದರು ಎಂದು ಆರೋಪಿಸಲಾಗಿದೆ.












Click it and Unblock the Notifications