ಚುನಾವಣೆ ಭೀತಿ: ಬೆಂಗಳೂರು ರಸ್ತೆ ಅಗಲೀಕರಣಕ್ಕೆ ಕೊಕ್

ಚುನಾವಣೆ ಸಮೀಪಿಸುತ್ತಿವೆ. ಈ ಹಂತದಲ್ಲಿ ರಸ್ತೆಗಳ ಅಗಲೀಕರಣ ಯೋಜನೆಗೆ ಕೈ ಹಾಕಿದರೆ ಸ್ಥಳೀಯ ಕಾರ್ಪೊರೇಟುಗಳು/ಶಾಸಕರ ಪ್ರತಿರೋಧ ಎದುರಿಸಬೇಕಾಗುತ್ತದೆ. ಹಾಗಾಗಿ ಚುನಾವಣೆ ಮುಗಿದ ಬಳಿಕ ಬಾಕಿ ಉಳಿದಿರುವ 216 ರಸ್ತೆಗಳ ಅಗಲೀಕರಣ ಯೋಜನೆಯನ್ನು ಮುಂದುವರಿಸುವುದಾಗಿ ಮೇಯರ್ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.
ಈ ಮಧ್ಯೆ, ಇಡೀ ರಾಜ್ಯ ಚುನಾವಣೆಯ ಹೊಸ್ತಿಲಲ್ಲಿದೆ. ಹಾಗಾಗಿ ರಾಜಧಾನಿ ಬೆಂಗಳೂರಿನಿಂದ ಆರಂಭವಾಗಿ ಒಂದೊಂದೇ ಪಟ್ಟಣ ಪ್ರದೇಶಗಳು ಸುಣ್ಣಬಣ್ಣ, ತಾರು ಬಳಿದುಕೊಂಡು ಸಿಂಗಾರಗೊಳ್ಳುತ್ತಿವೆ.
ರಾಜಧಾನಿ ಬೆಂಗಳೂರಿನ ಯಾವುದೇ ಬಡಾವಣೆಯಲ್ಲಿ ಕಾಲಿಡಿ ಸ್ಥಳೀಯ ಕಾರ್ಪೊರೇಟರ್ ನಿಂದ ಹಿಡಿದು ಶಾಸಕ/ಸಂಸದ ಮತ್ತಿತರ ಧೀಮಂತ ಜನನನಾಯಕರ ಧ್ವನಿ ಕೇಳಿಬರುತ್ತಿದೆ. ಕಾರ್ಪೊರೇಟರುಗಳಂತೂ ತವರು ಮನೆಗೆ ಬಂದವರಂತೆ ಜನರ ಬೀದಿ ಬಾಗಿಲಿಗೆ ಬರುತ್ತಿದ್ದಾರೆ. ಏನ್ರಮ್ಮಾ ನಿಮ್ಮ ಸಮಸ್ಯೆ/ ಏನಣ್ಣಾ ಹೇಗಿದ್ದೀಯಾ? ಎಂದು ಜನರನ್ನು ತಲುಪುತ್ತಿದ್ದಾರೆ.
ಯಾರಿಗೂ ಬೇಡವಾಗಿ ಅನಾಥವಾಗಿರುವ ಕನ್ಸರ್ವೆನ್ಸಿ ರಸ್ತೆಗಳಲ್ಲಿ ಠಳಾಯಿಸುತ್ತಿರುವ so-called ಜನನಾಯಕರು ಆ ರಸ್ತೆಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ರಸ್ತೆಗೊಂದು ಗೇಟು ಹಾಕಿಸುತ್ತಿದ್ದಾರೆ. ರಸ್ತೆ ರಿಪೇರಿ ಮಾಡಿಸುತ್ತಿದ್ದಾರೆ.
ಇನ್ನು ಮುಖ್ಯ ರಸ್ತೆಗಳತ್ತ ಪಾದ ಬೆಳೆಸಿ, ಖುದ್ದಾಗಿ ನಿಂತು ಟಾರು ಹಾಕಿಸುತ್ತಿದ್ದಾರೆ. ಅದೋ... ಗಾಯದಂತೆ ರಸ್ತೆ ಮೇಲೆ ಎದ್ದು ಕಾಣುತ್ತಿದೆ. ಆದರೂ ಜನನಾಯಕರು ಮಾತ್ರ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಇನ್ನೇನು ಬಾಕಿಯಿದೆ. ಹೇಳಿ ಎಲ್ಲ ಕೆಲ್ಸ ಮಾಡಿಸಿಕೊಡುವೆ ಎಂದು ಮನೆ ಮುಂದೆ ನಿಂತ ಮತದಾರ ಪ್ರಭುವಿನತ್ತ ಪ್ಯಾಲಿ ನಗೆ ಚೆಲ್ಲುತ್ತಿದ್ದಾರೆ.
ಬೆಂಗಳೂರಿನ ರಸ್ತೆಗಳನ್ನು ರಿಪೇರಿ ಮಾಡಿ ಎಂದು ಸರಕಾರವೇ 1,663 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿ ಕೃತಾರ್ಥವಾಗಿದೆ. ಆಡಳಿತಾರೂಢ ಬಿಜೆಪಿಗಂತೂ ಬೆಂಗಳೂರು ಪ್ರತಿಷ್ಠೆಯ ಕಣವಾಗಿದೆ. 2008ರ ಮೇನಲ್ಲಿ ಇಲ್ಲಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಸ್ಥಾನಗಳನ್ನು ಬಾಚಿಕೊಂಡಿತ್ತು. ಈಗ ಅದೇ ಪ್ರಭುತ್ವ ಸ್ಥಾಪಿಸಿಲು ಹೆಣಗಾಡುತ್ತಿದೆ.












Click it and Unblock the Notifications