ಐಟಿ ಸಿಟಿಯಲ್ಲಿ ಒಂದೇ ದಿನ 6 ಆತ್ಮಹತ್ಯೆಗಳು
ವಿದ್ಯಾರ್ಥಿನಿ ಸಾವು: ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪಾ ಲೇಔಟ್ನ ನಿವಾಸಿ ಮೊದಲ ವರ್ಷದ ಎಂಬಿಎ ವಿದ್ಯಾರ್ಥಿನಿ ಅನುಷಾ(23) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು.
ಕೊಡಗು ಮೂಲದ ನಿವೃತ್ತ ಸೈನಿಕ ಸುಬ್ಬಯ್ಯ ಮತ್ತು ತಾಯಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು. ಬುಧವಾರ ತಂದೆ-ತಾಯಿ ಇಬ್ಬರು ಮನೆಯಿಮ್ದ ಹೊರಕ್ಕೆ ತೆರಳಿದ್ದ ವೇಳೆ ಅನುಷಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಾವಿಗೂ ಮುನ್ನ ಸ್ನೇಹಿತರ ಮೊಬೈಲ್ಗೆ ಎಸ್ಎಂಎಸ್ ಮಾಡಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾಳೆ. ಅಲ್ಲದೆ, ಮರಣ ಪತ್ರ ಬರೆದಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದಿದ್ದಾಳೆ. ಆತ್ಮಹತ್ಯೆ ವಿಚಾರವನ್ನು ಅನುಷಾ ತನ್ನ ಸ್ನೇಹಿತನಿಗೆ ತಿಳಿಸಿದ್ದರು. ಅನುಮಾನಗೊಂಡ ಆತ ಬುಧವಾರ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ವರದಕ್ಷಿಣೆ ಕಿರುಕುಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೋವಿಂದಪ್ಪ ರಸ್ತೆ ಆರ್.ಎಸ್.ಪಾಳ್ಯದ ಮೇರಿ ಶಶಿಕಲಾ (31) ಆತ್ಮಹತ್ಯೆಗೆ ಶರಣಾದ ಮಹಿಳೆ. ಒಂದೂವರೆ ವರ್ಷದ ಹಿಂದೆ ಉದ್ಯಮಿ ಮಿಲ್ಟಿನ್ರಾಯ್ನೊಂದಿಗೆ ಮದುವೆಯಾಗಿತ್ತು. ಪತಿ ಪೂರ್ವ ವಲಯ ರೈಲ್ವೇ ನಿಲ್ದಾಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. ಈತ ನಿತ್ಯ ವರದಕ್ಷಿಣೆ ತರುವಂತೆ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಶಶಿಕಲಾ ಆತ್ಮಹತ್ಯ್ಗೆ ಶರಣಾಗಿದ್ದಾಳೆ ಎಂದು ಶಶಿಕಲಾ ತಾಯಿ ರೋಸ್ ಲೈನ್ ದೂರು ನೀಡಿದ್ದಾರೆ.
ಕೌಟುಂಬಿಕ ಕಲಹ: ಕೌಟುಂಬಿಕ ಕಲಹದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೇಖಾಭಟ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಮೂಲದ ರೇಖಾಭಟ್ಗೆ 5 ವರ್ಷದ ಹಿಂದೆ ಅರ್ಚಕ ವೃತ್ತಿ ಮಾಡುವ ಸುಬ್ಬರಾಯ ಭಟ್ ರನ್ನು ಮದುವೆಯಾಗಿದ್ದರು. ಆದರೆ, ಕೌಟುಂಬಿಕ ಕಲಹದಿಂದ ದಂಪತಿ ನಡುವೆ ವೈಮನಸ್ಸು ಏರ್ಪಟ್ಟು ಕಳೆದ 3 ವರ್ಷದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು.
ತಿಂಗಳ ಹಿಂದೆ ಎರಡೂ ಮನೆಯವರು ನ್ಯಾಯ ಪಂಚಾಯ್ತಿ ಮಾಡಿ ಗಂಡ-ಹೆಂಡತಿಯನ್ನು ಒಟ್ಟುಗೂಡಿಸಿದ್ದು, ಮಲ್ಲೇಶ್ವರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆದರೆ, ಮಂಗಳವಾರ ಮತ್ತೆ ದಂಪತಿ ನಡುವೆ ಜಗಳವಾಗಿದ್ದು, ಪತಿ ರಾತ್ರಿ 8.30ರ ಸಮಯದಲ್ಲಿ ಪಕ್ಕದ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾಗ ರೇಖಾಭಟ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವನದ ಜಿಗುಪ್ಸೆ: ಜೀವನದಲ್ಲಿ ಜಿಗುಪ್ಸೆ ಹೊಂದಿದ ಪೈಂಟರ್ ಮುರುಳೀಧರ್ (32) ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿಳೇಕಳ್ಳಿ ಸೋಮೇಶ್ವರ ಲೇಔಟ್ ನಿವಾಸಿ ಮುರುಳಿಗೆ 6 ವರ್ಷದ ಹಿಂದೆ ಜ್ಯೋತಿ ಎಂಬಾಕೆ ಜೊತೆಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿವೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ವಿದ್ಯಾರ್ಥಿ ಆತ್ಮಹತ್ಯೆ: ಬುಧವಾರ ಸಂಜೆ ನಡೆದ ಮತ್ತೊಂದು ಪ್ರಕರಣದಲ್ಲಿ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಗಸಂದ್ರದ ಗುರುಮೂರ್ತಿ ಲೇಔಟ್ನಲ್ಲಿ ಪೃಥ್ವಿರಾಜ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಯಾನಂದ ಸಾಗರ್ ಕಾಲೇಜಿನಲ್ಲಿ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೋಷಕರು ಬೆಳಗ್ಗೆ ಕನಕಪುರಕ್ಕೆ ದೇವಾಲಯಕ್ಕೆ ತೆರಳಿ ಸಂಜೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗೃಹಿಣಿ ಸಾವು: 30 ವರ್ಷ ವಯಸ್ಸಿನ ಶೈಲಜಾ ಎಂಬ ಗೃಹಿಣಿ ಮತ್ತಿಕೆರೆಯ ಎಸ್ ಬಿಎಂ ಕಾಲೋನಿಯಲ್ಲಿನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೈಲಜಾ ಸಾವಿಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಯಶವಂತಪುರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.













Click it and Unblock the Notifications