ಅಜ್ಮಲ್ ಕಸಬ್ಗಿಂತ ಮೊದಲು ಗಲ್ಲಿಗೇರಿದ್ದು ಯಾರು?
ಯಾಕೆ, ಕಸಬ್ನನ್ನು ಗಲ್ಲಿಗೇರಿಸಲು ಯಾರೂ ಇರಲಿಲ್ಲವೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಅಸಲಿಗೆ, ಯರವಾಡಾ ಜೈಲಿನಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ಗಲ್ಲಿಗೇರಿಸುವಂತಹ ವ್ಯಕ್ತಿ ಯಾರೂ ಇಲ್ಲವೇ ಇಲ್ಲ. ಯರವಾಡಾ ಜೈಲಿನಲ್ಲಿ ಗಲ್ಲಿಗೇರಿಸುವ ವ್ಯಕ್ತಿ 1995ರಲ್ಲಿ ನಿವೃತ್ತಿಯಾಗಿದ್ದ. ಇನ್ನು ಉಳಿದ ಜೈಲಿನಲ್ಲಿದ್ದ ಗಲ್ಲಿಗೇರಿಸುವ ವ್ಯಕ್ತಿಗಳು ಒಂದು ನಿವೃತ್ತರಾಗಿದ್ದಾರೆ ಇಲ್ಲ ಇಹಲೋಕ ತ್ಯಜಿಸಿದ್ದಾರೆ.
ಯಾಕೆ ಬೇರೆಯವರು ಮಾಡಬಹುತ್ತಿಲ್ಲವೆ? ಎಂಬ ಪ್ರಶ್ನೆಯೂ ಕಾಡಬಹುದು. ವಸ್ತುಸ್ಥಿತಿ ಏನೆಂದರೆ, ಗಲ್ಲಿಗೇರಿಸುವ ಕಾಯಕ ಮಾಡುವವರು ನುರಿತವರಾಗಿರುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗಟ್ಟಿ ಗುಂಡಿಗೆಯವರಾಗಿರಬೇಕು. ಅವರು ಅತ್ಯಂತ ನಿಖರವಾಗಿ, ಯಾವುದೇ ಭಾವನೆಗಳಿಲ್ಲದೆ, ಮಾನಸಿಕ ಸ್ಥಿರತೆಯಿಂದ ಕುಣಿಕೆ ಎಳೆಯಬೇಕಾಗುತ್ತದೆ. ಮತ್ತು ಅವರು ಜೈಲಿನಿಂದ ನೇಮಕವಾಗಿರುವಂತಹ ವ್ಯಕ್ತಿಯೇ ಆಗಿರಬೇಕು. ಹೀಗಾಗಿ ಜೈಲು ಅಧಿಕಾರಿಯೇ ಕಸಬ್ನಲ್ಲಿ ನೇಣುಗಂಬಕ್ಕೆ ಏರಿಸಬೇಕಾಯಿತು.
ಮತ್ತೊಂದು ವಿಸ್ಮಯಕಾರಿ ಸಂಗತಿಯೆಂದರೆ, ಪಶ್ಚಿಮ ಬಂಗಾಳದಲ್ಲಿ 1990ರಲ್ಲಿ ಮಗುವನ್ನು ಬಲಾತ್ಕರಿಸಿ ಹತ್ಯೆಗೈದಿದ್ದ ಧನಂಜೊಯ್ ಚಟರ್ಜಿ ಎಂಬುವವನನ್ನು 2004ರಲ್ಲಿ ಕೊಲ್ಕತಾ ಜೈಲಿನಲ್ಲಿ ಗಲ್ಲಿಗೇರಿಸಿದ ನಂತರ ಭಾರತದಲ್ಲಿ ಯಾರನ್ನೂ ಗಲ್ಲಿಗೇರಿಸಿರಲಿಲ್ಲ. ಚಟರ್ಜಿ ನಂತರ ಗಲ್ಲಿಗೇರಿದ್ದು ಅಜ್ಮಲ್ ಕಸಬ್, ಅದೂ ಎಂಟು ವರ್ಷಗಳ ನಂತರ.
ಚಟರ್ಜಿಯನ್ನು ಅಂದು 84 ವರ್ಷದ ನಾತಾ ಮಲ್ಲಿಕ್ ಎಂಬುವವರು ತಮ್ಮ ಮಗ ಮತ್ತು ಮೊಮ್ಮಗನ ಸಹಾಯದಿಂದ ಗಲ್ಲಿಗೇರಿಸಿದ್ದರು. ಚಟರ್ಜಿಯನ್ನು ಗಲ್ಲಿಗೇರಿಸಿದ ನಂತರ ಮೈಕ್ರೋಫೋನ್ ಹಿಡಿದುಕೊಂಡು ತಾವು ಮಾಡಿದ ಕಾರ್ಯವನ್ನು ಎಲ್ಲರಿಗೂ ಹೇಳಿಕೊಂಡು ಬಂದಿದ್ದರು. ಹೌದು, ಅಮಾನುಷವಾಗಿ ಜನರನ್ನು ಕೊಲ್ಲುವ ವ್ಯಕ್ತಿಯನ್ನು ಗಲ್ಲಿಗೇರಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ. [ವಿಡಿಯೋ]
ಇದೇಕೆ ಇಷ್ಟು ವರ್ಷಗಳ ಅಂತರ? : ಭಾರತದಲ್ಲಿ ಗಲ್ಲಿಗೇರಿಸುವ ಪ್ರಕ್ರಿಯೆ ಅಷ್ಟೊಂದು ಸರಳವಾಗಿಲ್ಲ. ವಿರಾಳಾತಿ ವಿರಳ ಪ್ರಕರಣದಲ್ಲಿ ಮಾತ್ರ ನೀಡಲಾಗುವ ಗಲ್ಲು ಶಿಕ್ಷೆ ವಿಧಿಸಿದ ನಂತರ ಎಲ್ಲವೂ ನ್ಯಾಯಯುತವಾಗಿ, ಕ್ರಮಬದ್ಧವಾಗಿ ನಡೆಯಬೇಕು. ಸೆಷನ್ಸ್ ಕೋರ್ಟಿನಲ್ಲಿ ಗಲ್ಲು ಶಿಕ್ಷೆಯಾದರೆ, ಮತ್ತೊಮ್ಮೆ ವಿಚಾರಣೆ ನಡೆದು ಹೈಕೋರ್ಟ್ನಿಂದ ಅನುಮತಿ ದೊರೆಯಬೇಕು, ಅಲ್ಲಿಂದ ಸುಪ್ರೀಕೋರ್ಟ್ ಮೆಟ್ಟಿಲೇರಿ ಅಲ್ಲಿಂದಲೂ ಅನುಮತಿ ದೊರೆಯಬೇಕು. ನಂತರ ಕ್ಷಮಾದಾನ ಕೋರಲು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಅಪರಾಧಿಗೆ ಅವಕಾಶವಿರುತ್ತದೆ. ಅದೂ ತಿರಸ್ಕೃತವಾದರೆ ಮಾತ್ರ ಗಲ್ಲಿಗೇರಿಸಬೇಕು. ಇಂತಹ ಡಜನ್ ಗಟ್ಟಲೆ ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿಗಳ ಮುಂದಿವೆ. ಇಷ್ಟು ವರ್ಷಗಳಲ್ಲಿ ಕಸಬ್ ಗಲ್ಲಿಗೇರಿಸಲು ಮುಹೂರ್ತ ಕೂಡಿಬಂದಿದೆ.