ಕುಮಾರಣ್ಣ ನಿಮ್ಮನೆಗೇ ಬರುವೆ: ಬಿಜೆಪಿ ಶಂಕರಲಿಂಗೇಗೌಡ

'ಕುಮಾರಣ್ಣ ಇಲ್ಲಿರುವೆ (ಬಿಜೆಪಿ) ಸುಮ್ಮನೆ; ಅಲ್ಲಿದೆ (ಜೆಡಿಎಸ್) ನಮ್ಮನೆ' ಎಂದಿರುವ ಬಿಜೆಪಿ ಶಂಕರಲಿಂಗೇಗೌಡರು ತನ್ಮೂಲಕ ಕುಮಾರಸ್ವಾಮಿಯನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡರ ಮೇಲೆ ಅದರಲ್ಲೂ ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಯರ್ರಾಬಿರ್ರಿಯಾಗಿ ಎಗರಾಡುತ್ತಿರುವ ಸನ್ಮಾನ್ಯ ಬಿಜೆಪಿ ಶಾಸಕ ಶಂಕರಲಿಂಗೇಗೌಡರು ನಾನು ಈಗಾಗಲೇ ಮಾನಸಿಕವಾಗಿ ಜೆಡಿಎಸ್ ನಲ್ಲಿದ್ದೇನೆ ಎಂದು ಭಾನುವಾರ ಅಧಿಕೃತವಾಗಿ ಘೋಷಿಸಿದ್ದಾರೆ.
'TA ಮತ್ತು DA ಪಡೆಯುವ ಸಲುವಾಗಿ ಮಾತ್ರ ಇನ್ನೊಂದೆರಡು ತಿಂಗಳು ಅತ್ಲಾಗೆ ಬಿಜೆಪಿಯಲ್ಲೇ ಇರುವೆ. ಅದು ಮುಗಿಯುತ್ತಿದ್ದಂತೆ ಸೀದಾ ಜೆಡಿಎಸ್ ಅಂಗಳಕ್ಕೆ ಜಿಗಿಯುವೆ. ಆ ಮೇಲೆ ಕುಮಾರಣ್ಣ ಮತ್ತೊಂದು ವಿಷಯ ನಾನು ... ನನ್ನ ಹಾಲಿ ಕ್ಷೇತ್ರವಾದ ಚಾಮರಾಜ ಕ್ಷೇತ್ರದಿಂದಲೇ ಮುಂದಿನ ವಿಧಾನಸಭೆಗೆ ಕಣಕ್ಕಿಳಿಯುವೆ' ಎಂದು ಶಂಕರಲಿಂಗೇಗೌಡರು ಅಡ್ಡಬಿದ್ದಿದ್ದಾರೆ.
ಲಿಂಗೇಗೌಡರಿಗೆ ಎಚ್ ಡಿ ರೇವಣ್ಣ ಅಭಯ: ಶಂಕರಲಿಂಗೇಗೌಡರ ಈ ಜಿಗಿದಾಟಕ್ಕೆ ಸಾಕ್ಷ್ಯವಾಗಿದ್ದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಖುದ್ದು ಎಚ್ ಡಿ ರೇವಣ್ಣ. ಯಡಿಯೂರಪ್ಪ ಎಡವಿದ್ದಾರೆ. ಅವರು ಈಗ ಹೆಡೆ ಮುಚ್ಚಿದ ಹಾವು. ಹೀಗಾಗಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಭವಿಷ್ಯವಿಲ್ಲ ಎಂದು ನನಗೆ ಚೆನ್ನಾಗಿ ಮನದಟ್ಟಾಗಿದೆ ಎಂದೂ ಶಂಕರಲಿಂಗೇಗೌಡರು ಟೀಕಿಸಿದರು.
'ಶಂಕರಲಿಂಗೇಗೌಡ ಅವರನ್ನು ಜೆಡಿಎಸ್ಗೆ ಸ್ವಾಗತಿಸುತ್ತೇನೆ. ಸದ್ಯದಲ್ಲೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊರ ಹಾಕುವ ಕಾಲ ಸನ್ನಿಹಿತವಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ' ಎಂದು ಎಚ್ಡಿ ರೇವಣ್ಣ ಅವರೂ ಇದೇ ಸಂದರ್ಭದಲ್ಲಿ ಅವರಿಗೆ ಅಭಯ ನೀಡಿದ್ದಾರೆ.
ರಾಜಕೀಯ ಎಡಬಿಡಂಗಿ ಎಂದು ತಮ್ಮ ಕ್ಷೇತ್ರದಲ್ಲೇ ಚಿರಪರಿಚಿತರಾಗಿರುವ ಶಂಕರಲಿಂಗೇಗೌಡರಿಗೆ ಈ ಬಾರಿ ಮತದಾರ ಏನು ಉತ್ತರ ಕೊಡುತ್ತಾನೋ ಕಾದು ನೋಡಬೇಕಾಗಿದೆ.












Click it and Unblock the Notifications