ಕಾಂಗ್ರೆಸ್ ವಿರುದ್ದ ಬಿಜೆಪಿ ನೆರವಿಗೆ ಬಂದ ಕುಮಾರಸ್ವಾಮಿ

ಕೇಂದ್ರ ಆಯಾಯ ರಾಜ್ಯಗಳಿಗೆ ನೀಡುತ್ತಿರುವ ಅನುದಾನವು ರಾಜ್ಯಗಳ ಪಾಲಿನ ಭಿಕ್ಷೆಯಲ್ಲ. ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯ ಒಂದು ಭಾಗ ಎಂದು ಕೇಂದ್ರದ ಯುಪಿಎ ಸರಕಾರ ಮೊದಲು ಅರಿತುಕೊಳ್ಳಲಿ. ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾದ 80 ಸಾವಿರ ಕೋಟಿ ರೂಪಾಯಿಗಳನ್ನು ಹೇಗೆ ಖರ್ಚು ಮಾಡಲಾಯಿತೆಂದು ಲೆಕ್ಕ ಕೊಡಿ ಎಂದು ಕಾಂಗ್ರೆಸ್ ಪಕ್ಷ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ.
ಲೆಕ್ಕ ಕೊಡಿ ಆಂದೋಲನ ನಡೆಸುವ ಬದಲು ರಾಜ್ಯಗಳಿಗೆ ನೀಡಬೇಕಾದ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಎಷ್ಟು ಹಣ ಕೇಂದ್ರದಿಂದ ಬಿಡುಗಡೆಯಾಗಿದೆ ಎನ್ನುವ ಲೆಕ್ಕವನ್ನು ಕಾಂಗ್ರೆಸ್ ನಾಯಕರು ನೀಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿಗಾಗಲಿ ಅಥವಾ ಕೇಂದ್ರದಲ್ಲಿರುವ ರಾಜ್ಯದ ಸಚಿವರುಗಳಿಗೆ ನಮ್ಮ ರಾಜ್ಯದ ಸಮಸ್ಯೆಯ ಬಗ್ಗೆ ಅರಿವಿಲ್ಲ. ಬಿಜೆಪಿಯಲ್ಲಿನ ಒಡಕಿನ ಲಾಭ ಪಡೆದುಕೊಂಡು ಅಧಿಕಾರಕ್ಕೆ ಬರಬೇಕೆನ್ನುವುದೊಂದೇ ಕಾಂಗ್ರೆಸ್ ಪಕ್ಷದ ಮೊದಲ ಆದ್ಯತೆ. ದೇಶ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದೆ.
ಹಾಗಾಗಿ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ರಾಜ್ಯದ ಜನತೆಗೆ ಮುಖ್ಯವಾಗಿ ರೈತರಿಗೆ ನೆರವಾಗುವ ಪಕ್ಷದ ಪ್ರಣಾಳಿಕೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯಾವುದೇ ಕಿಕ್ ಬ್ಯಾಕ್ನಿಂದ ಬಂದ ಪಕ್ಷ ನಮ್ಮದಲ್ಲ. 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಬಡವರ, ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆ ಇಲ್ಲದಿರುವುದರಿಂದಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಮಟ್ಟಕ್ಕೆ ಇಳಿಯಿತೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಐದು ವರ್ಷ ಅಧಿಕಾರದಲ್ಲಿದ್ದರೆ ನರೇಂದ್ರ ಮೋದಿ ರೀತಿಯಲ್ಲಿ ರಾಜ್ಯವನ್ನು ಅಭಿವೃದ್ದಿ ಮಾಡಿ ತೋರಿಸುತ್ತಿದ್ದೆ ಎಂದು ಯಡಿಯೂರಪ್ಪನವರು ಹೇಳಿಕೆ ನೀಡುತ್ತಾರೆ. ರಾಜ್ಯದ ಜನತೆ ಅವರಿಗೆ ಐದು ವರ್ಷದ ಅವಧಿಯನ್ನೇ ನೀಡಿದ್ದರು. ಅವರಿಗೆ ಐದು ವರ್ಷ ಆಡಳಿತ ನಡೆಸಲು ಅಡಚಣೆ ನೀಡಿದವರಾರು ಎಂದು ಮೊದಲು ಯಡಿಯೂರಪ್ಪ ಬಹಿರಂಗ ಪಡಿಸಲಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಪಕ್ಷದ ಅಭ್ಯರ್ಥಿ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ ಸದಾನದ ಶೆಟ್ಟಿ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಶೆಟ್ಟಿಯವರನ್ನು ಪಕ್ಷದ ಧ್ವಜ ಮತ್ತು ಶಾಲು ನೀಡಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಲಾಯಿತು.












Click it and Unblock the Notifications