ತಡರಾತ್ರಿ ಬೆಳವಣಿಗೆ: ಸಚಿವ ಕಟಾರಿಯಾಗೆ 'ರಕ್ಷಣೆ' ಇಲ್ಲ

ಲಾಲ್ಚಂದ್ ಕಟಾರಿಯಾ 'ಎಂಬುವವರನ್ನು' ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಕ್ಷಣಾ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಕಗೊಳಿಸಿದ್ದರು. ಆದರೆ ದಯವಿಟ್ಟು ಆ ಖಾತೆಯನ್ನು ವಹಿಸಿಕೊಳ್ಳಬೇಡಿ ಎಂದು ಪ್ರಧಾನಿ ಕಚೇರಿಯು ಕಟಾರಿಯಾಗೆ ದುಂಬಾಲು ಬಿದ್ದಿದೆ. ಅದೂ ಒಂದು ದಿನ ತಡವಾಗಿ.
ಯಾಕಪ್ಪಾ ಹೀಗೆ ಎಂದು ನೋಡಿದರೆ ರಕ್ಷಣಾ ಖಾತೆಯ ರಾಜ್ಯ ಸಚಿವರಾಗಿ ಲಾಲ್ಚಂದ್ ಕಟಾರಿಯಾ ಅವರ ಜತೆಗೆ 'ಮತ್ತೊಬ್ಬರನ್ನೂ' ನೇಮಕ ಮಾಡಲಾಗಿತ್ತು. ಅವರು ಜಿತೇಂದ್ರ ಸಿಂಗ್. ಸರಿ ದೇಶದ 'ರಕ್ಷಣೆಯ' ಖಾತೆಗೆ ಇಬ್ಬರಿರಲಿ ಬಿಡಿ ಅನ್ನಬಹುದು. ಅದರಲ್ಲೇನು ತಪ್ಪಿಲ್ಲ. ಆದರೆ ಪ್ರಧಾನಿ ಸಿಂಗ್ ಅವರು ರಾಜಕೀಯವಾಗಿ ಇಲ್ಲಿ ಎಡವಿದ್ದರು.
ಏನೆಂದರೆ ಲಾಲ್ಚಂದ್ ಕಟಾರಿಯಾ ಮತ್ತು ಜಿತೇಂದ್ರ ಸಿಂಗ್ ಇಬ್ಬರೂ ರಾಜಾಸ್ಥಾನದವರೇ! ಒಂದೇ ರಾಜ್ಯದ ಇಬ್ಬರಿಗೆ ಒಂದೇ ಖಾತೆ ನೀಡುವುದು ರಾಜಕೀಯವಾಗಿ ಸರಿಯಲ್ಲ ಎಂದು ತಡವಾಗಿ ಜ್ಞಾನೋದಯವಾಗುತ್ತಿದ್ದಂತೆ ಕಟಾರಿಯಾಗೆ ಅಧಿಕಾರ ವಹಿಸಿಕೊಳ್ಳದಂತೆ ಪ್ರಧಾನಿ ಕಚೇರಿ ದಮ್ಮಯ್ಯಾ ಅಂದಿದೆ.
ನೀತಿ ಪಾಠವೇನು?:
ಸದ್ಯ ಲಾಲ್ಚಂದ್ ಕಟಾರಿಯಾ ಇನ್ನೂ ಪದಗ್ರಹಣ ಮಾಡಿರಲಿಲ್ಲ. ಹಾಗಾಗಿ ಅವರಿಗೆ 'ರಕ್ಷಣೆ' ಇಲ್ಲವಾಗಿದೆ. ಇನ್ನು ಯುವಜನ ಮತ್ತು ಕ್ರೀಡಾ ಖಾತೆಯ ರಾಜ್ಯ ಸಚಿವರಾಗಿ ಪದಗ್ರಹಣ ಮಾಡಿದ್ದ ಜಿತೇಂದ್ರ ಪ್ರಸಾದ್ ಅವರು ಹೆಚ್ಚುವರಿಯಾಗಿ ರಕ್ಷಣಾ ಖಾತೆ ಅಧಿಕಾರವನ್ನೂವಹಿಸಿಕೊಂಡಿದ್ದರಿಂದ 'ರಕ್ಷಣೆ' ಪಡೆದಿದ್ದಾರೆ. ಕಟಾರಿಯಾ ಖಾತೆಯ ಬಗ್ಗೆ ನಾಳೆ ಬುಧವಾರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ, ಅದರಲ್ಲೂ ಅಧಿಕಾರಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡುವ ಮಂದಿಗೆ ಇದರ ನೀತಿ ಪಾಠವೇನು?












Click it and Unblock the Notifications