ಹಾಲುಗಲ್ಲದ ಕಂದನ ಅಪಹರಿಸಿ, ಸಾಯಿಸಿದ ಯಂಡಮೂರಿ
ವಾಷಿಂಗ್ಟನ್, ಅ.27: ಅಪಹರಣಕ್ಕೊಳಗಾಗಿದ್ದ ಆಂಧ್ರ ಪ್ರದೇಶ ಮೂಲದ 10 ತಿಂಗಳ ಮಗು ಸಾನ್ವಿ ವೆನ್ನಾಳ ಶವ ಫಿಲಡೆಲ್ಫಿಯಾದ ವಸತಿ ಸಂಕೀರ್ಣವೊಂದರಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಮಗುವನ್ನು ಸೂಟ್ ಕೇಸಿನಲ್ಲಿ ಉಸರುಗಿಟ್ಟಿಸಿ, ಸಾಯಿಸಲಾಗಿದೆ.
ಪ್ರಕರಣದ ಸಂಬಂಧ ಈಗ ಬಂಧಿಯಾಗಿರುವ ಪಾತಕಿಯು ಸಾನ್ವಿ ನೆರೆಮನೆಯಾತ. ರಘುನಂದನ ಯಂಡಮೂರಿ ಎಂಬ ಈ ಯುವಕ ಮೊದಲು ಮಗುವನ್ನು ಅಪಹರಿಸಿ, ಲಕ್ಷಾಂತರ ರೂಪಾಯಿ ಒತ್ತೆ ಹಣ ಗಳಿಸಲು ( ಅಂದರೆ $ 50,000- ಮಗುವಿನ ತಂದೆ ವೆಂಟಕ ಕೊಂಡ ಶಿವ ವೆನ್ನಾ ಅವರ 5 ತಿಂಗಳ ಸಂಬಳ- ಅಂದಾಜು 26,79,000 ರೂಪಾಯಿ) ಯೋಜನೆ ರೂಪಿಸಿದ್ದ.

ಅದರಂತೆ ಸೋಮವಾರ (ಅ. 22) ಅಜ್ಜಿಯ ಮಡಿಲಲ್ಲಿದ್ದ ಮಗುವನ್ನು ಪಕ್ಕದ ಮನೆಯ ಯಂಡಮೂರಿ ಅಪಹರಿಸಲು ಮುಂದಾದ. ಅದಕ್ಕೆ ಅಜ್ಜಿ ಸತ್ಯವತಿ (61) ತೀವ್ರ ಪ್ರತಿರೋಧವೊಡ್ಡಿದರು. ಆದರೆ ಬಿಸಿರಕ್ತದ ಪಾಪಿ ಯಂಡಮೂರಿ ಹಿರಿಯ ಜೀವವನ್ನು ಸಾಯಿಸೇ ಬಿಟ್ಟ. ನಂತರ, ಮಗು ಸಾನ್ವಿಯನ್ನು ಎತ್ತಿಕೊಂಡು ಪರಾರಿಯಾಗಿದ್ದ.
ಸಾನ್ವಿಯನ್ನು ಸುರಕ್ಷಿತವಾಗಿ ಕರೆತಂದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದರು. ಆದರೂ ಮಗು ಪತ್ತೆಯಾಗಲಿಲ್ಲ. ಆಗ ಮನೆಯವರು ಮತ್ತು ಸ್ಥಳೀಯ ತೆಲುಗು ಸಂಘದವರು ಬಹುಮಾನದ ಮೊತ್ತವನ್ನು ದ್ವಿಗುಣಗೊಳಿಸಿದ್ದರು.
ಅಪಹರಿಸಿದ ಬಳಿಕ ಪ್ರಕರಣವು ಎಲ್ಲೆಡೆ ಸಂಚಲನವನ್ನುಂಟುಮಾಡಿತ್ತು. ಇದರಿಂದ ಗಾಬರಿಗೆ ಬಿದ್ದ ಯಂಡಮೂರಿ, ಮಗುವನ್ನು ಖರ್ಚೀಫಿನಿಂದ ಉಸಿರುಗಟ್ಟಿಸಿ, ಸಾಯಿಸಿದ್ದಾನೆ. ನಂತರ ಮಗುವಿನ ಶವವನ್ನು ಸೂಟ್ ಕೇಸಿನಲ್ಲಿ ತಿರುಕಿದ್ದಾನೆ. ಬಳಿಕ ಅದನ್ನು ಅಪಾರ್ಟ್ ಮೆಂಟಿನ ನೆಲಮಾಳಿಗೆಯಲ್ಲಿ ಬಿಸಾಡಿದ್ದಾನೆ. ಆಶ್ಚರ್ಯವೆಂದರೆ ಇದೇ ಪಾಪಿ ಯಂಡಮೂರಿ, ಪೊಲೀಸರು ಮಗುವಿನ ಹುಡಕಾಟದಲ್ಲಿದ್ದಾಗ ಸಾನ್ವಿ ಮನೆಯವರಿಗೆ ನೆರವಾಗಿದ್ದ.
ಇದೀಗ ರಘುನಂದನ ಯಂಡಮೂರಿಯನ್ನು ಬಂಧಿಸಿರುವ ಪೊಲೀಸರು ಹತ್ಯೆ, ಅಪಹರಣ, ದರೋಡೆ, ಡಕಾಯಿತಿ, ಕಳ್ಳತನ, ಶವದ ದುರ್ಬಳಕೆ ಮುಂತಾದ ಆರೋಪಗಳನ್ನು ಹೊರಿಸಿ, ಜೈಲಿಗಟ್ಟಿದ್ದಾರೆ. ಯಾವ ಯಂಡಮೂರಿಯ ಕಥೆಗಳು ಈ ದುರುಳನಿಗೆ ಪ್ರೇರಣೆಯಾಗಿತ್ತೋ?












Click it and Unblock the Notifications