ಗೋವಾದೊಳಗೆ ಕಾರವಾರ : ಯುಟರ್ನ್ ಹೊಡೆದ ಅಸ್ನೋಟಿಕರ್

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾವು ಆ ರೀತಿ ಹೇಳಿಯೇ ಇಲ್ಲ. ಕಾರವಾರ ತಾಲೂಕಿನ ಅಭಿವೃದ್ಧಿಯೇ ನನಗೆ ಮುಖ್ಯ ಎಂದರು. ನೆರೆಯ ಗೋವಾ ರಾಜ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರ್ಪಡೆಗೊಳ್ಳುವುದರಿಂದ ಅಭಿವೃದ್ಧಿ ಸಾಧ್ಯವಿದೆ. ಹಾಗೂ ಈ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಅಸ್ನೋಟಿಕರ್ ಅವರು ಹೇಳಿದ್ದುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಜಿಲ್ಲೆಯ ಹೆಸರಿನಲ್ಲಿಯೇ ಕನ್ನಡ ಎಂಬ ಹೆಸರು ಹೊತ್ತ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂಬುದು ತಮ್ಮ ಮಹದಾಸೆ. ಕಾರವಾರ ಕರ್ನಾಟಕದಿಂದ ಬೇರ್ಪಡಬೇಕು ಎಂಬುದು ತಮ್ಮ ಆಸೆಯಲ್ಲವೇ ಅಲ್ಲ. ಅಲ್ಲದೆ, ನಾಲ್ಕು ನೂರು ಹಾಸಿಗೆಗಳ ಸಾಮರ್ಥ್ಯವಿರುವ ಸಾರ್ವಜನಿಕ ಅಸ್ಪತ್ರೆ ಇರುವ ಕಾರವಾರದಲ್ಲಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಗಬೇಕು ಎಂದು ಅವರು ನುಡಿದರು.
ಅಂತೆಯೇ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರಕ್ಕೆ ಎಲ್ಲಾ ಸೌಲಭ್ಯಗಳು, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು, ದೊರೆಯಬೇಕೆಂಬುದು ತಮ್ಮ ಬೇಡಿಕೆ. ಜಿಲ್ಲಾ ಜನತೆಯ ಆಶೋತ್ತರಗಳಿಗೆ, ವಿಶೇಷವಾಗಿ ತಮ್ಮ ಕ್ಷೇತ್ರದ ಜನತೆಯ ಬೇಡಿಕೆಗಳಿಗೆ ಸ್ಪಂದಿಸಲು ಯಾವುದೇ ಹೋರಾಟಕ್ಕೂ ತಾವು ಸಿದ್ದ ಎಂದು ಅವರು ಹೇಳಿದರು.
ತಮ್ಮ ಕ್ಷೇತ್ರದ ಜನತೆಯ ಆಶೋತ್ತರಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ್ದೇನೆ. ಅಲ್ಲದೆ ಕಾರವಾರಕ್ಕೆ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯವನ್ನು ಮಂಜೂರು ಮಾಡುವತ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.
ಅಣು ಸ್ಥಾವರ ಹಾಗೂ ನೌಕಾ ನೆಲೆಗಾಗಿ ಭೂಮಿ ಕೊಟ್ಟ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದಿಂದ ವಿಸ್ತರಿಸಬಹುದಾದ ಸೌಲಭ್ಯಗಳನ್ನು ಒದಗಿಸಿ ಎಂಬುದೇ ತಮ್ಮ ವಿನಮ್ರ ವಿನಂತಿ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂದು ಅವರು ವಿವರಿಸಿದರು.












Click it and Unblock the Notifications