ಕಾರವಾರವನ್ನು ಗೋವೆಗೆ ಸೇರಿಸಿ: ಸಚಿವ ಆಸ್ನೋಟಿಕರ್

ಅರಬ್ಬೀ ಸಮುದ್ರದಂಚಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೆಳವಣಿಗೆ ಹಿತದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ಮೀನುಗಾರಿಕೆ, ಕೃಷಿ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಜಿಲ್ಲೆ ಹಿಂದುಳಿದಿದೆ.
ನೆರೆಯ ಗೋವಾ ರಾಜ್ಯಕ್ಕೆ ಸೇರ್ಪಡೆಗೊಳ್ಳುವುದರಿಂದ ಅಭಿವೃದ್ಧಿ ಸಾಧ್ಯವಿದೆ. ಹಾಗೂ ಈ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಮೀನುಗಾರಿಕ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಆನಂದ್ ಆಸ್ನೋಟಿಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಜೀನಾಮೆಗೆ ಒತ್ತಾಯ: ಕರ್ನಾಟಕವನ್ನು ಇಬ್ಭಾಗ ಮಾಡಲು ಹೊರಟಿರುವ ಸಚಿವ ಆನಂದ್ ಆಸ್ನೋಟಿಕರ್ ಹೇಳಿಕೆಯನ್ನು ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಘಟಕ ಖಂಡಿಸಿದ್ದು, ಕೂಡಲೇ ರಾಜೀನಾಮೆ ನೀಡಿ ಜನತೆಯ ಕ್ಷಮೆಯಾಚಿಸುವಂತೆ ಕೋರಿದೆ.
ಕಾರವಾರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲು ಸಚಿವ ಆನಂದ್ ಆಸ್ನೋಟಿಕರ್ ಅವರೇ ಕಾರಣ. ಮೆಡಿಕಲ್ ಕಾಲೇಜು ಮಂಜೂರಾಗಲು ತಡವಾಗಿದ್ದು ಏಕೆ ಎಂದು ಸಚಿವರು ಮೊದಲು ಉತ್ತರಿಸಲಿ. ಆನಂದ್ ಅವರು ಬೇಕಾದರೆ ರಾಜೀನಾಮೆ ನೀಡಿ, ಗೋವಾಕ್ಕೆ ಹೋಗಿ ಸ್ಪರ್ಧಿಸಲಿ ಎಂದು ಕಾರವಾರ ವಿಭಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾ ನಾಯಕ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಚಿವರುಗಳಾದ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಹಾಗೂ ಮೀನುಗಾರಿಕೆ ಆನಂದ್ ಆಸ್ನೋಟಿಕರ್ ಅವರ ನಡುವಿನ ಪೈಪೋಟಿ, ಜಿಲ್ಲಾ ಉಸ್ತುವಾರಿ ಸಚಿವರಾಗಲು ಕಿತ್ತಾಟವೇ ಈ ರೀತಿ ಹೇಳಿಕೆಗೆ ಕಾರಣ ಎನ್ನಲಾಗಿದೆ.
ಕಾರವಾರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಶಿರಸಿ ಕಡೆಗೆ ತೆರಳಿದ್ದು ಆಸ್ನೋಟಿಕರ್ ಆಸ್ಫೋಟಕ್ಕೆ ಕಾರಣ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಜಿಲ್ಲೆ ಅಭಿವೃದ್ಧಿಗಾಗಿ ಇಬ್ಬರು ಸಚಿವರು ನಡೆಸಿರುವ ಕಿತ್ತಾಟ ಕರ್ನಾಟಕದ ಭಾಗವನ್ನು ಕಿತ್ತು ಗೋವೆಗೆ ಸೇರಿಸುವ ತನಕ ಮುಂದುವರೆದಿದೆ.
ಕಾರವಾರ: ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 350 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.
ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಾಷ್ಟ್ರಕವಿ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು."ಕಡಲ ತೀರದ ಕಾಶ್ಮಿರ" ಕಾರವಾರ.ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಕಾರವಾರ ಕರ್ನಾಟಕದ ಎರಡನೇ ಪ್ರಮುಖ ಬಂದರು.
ದೇಶದ ಅತೀ ದೊಡ್ಡ ನೌಕಾನೆಲೆ ಕಾರವಾರ.ಕರ್ನಾಟಕದ ಎಕೈಕ ಅಣು ವಿದ್ದುತ ಸ್ಥಾವರ ಕೈಗಾ ಕಾರವಾರದ ಸನಿಹದಲ್ಲಿದೆ. ಕಾರವಾರವು ಪ್ರವಾಸಿಗಳಿಗೆ ಒ೦ದು ಸು೦ದರ ತಾಣ.












Click it and Unblock the Notifications