ಮುಂಬರುವ ಬಿಜೆಪಿ ಸಮಾವೇಶಕ್ಕೆ ಯಡಿಯೂರಪ್ಪ

ಯಡಿಯೂರಪ್ಪನವರು ಡಿಸೆಂಬರ್ 10ರಂದು ಹೊಸ ಪಕ್ಷ ಘೋಷಿಸುತ್ತಾರೆ ಎನ್ನುವ ಸುದ್ದಿಯಿದೆ. ಅಲ್ಲಿಯ ತನಕ ಏನೂ ಹೇಳಲಾಗದು.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಪಕ್ಷ ಬಿಡುತ್ತಾರೆ ಎನ್ನುವುದನ್ನು ಊಹಿಸಲೂ ಕಷ್ಟವಾಗುತ್ತದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಮತ್ತು ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಪ್ರಮುಖ ಕಾರಣ. ಈ ತಿಂಗಳ 27 ರಿಂದ ನವೆಂಬರ್ 30ರ ತನಕದ ಅವಧಿಯಲ್ಲಿ ಆಯೋಜಿಸಲಾಗಿರುವ ಪಕ್ಷದ ಎಲ್ಲಾ ಸಮಾವೇಶದಲ್ಲಿ ಯಡಿಯೂರಪ್ಪ ಭಾಗವಹಿಸುತ್ತಾರೆ ಎನ್ನುವ ವಿಶ್ವಾಸ ನಮಗೆಲ್ಲರಿಗಿದೆ ಎಂದು ಜೋಷಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮುಂಬರುವ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡ ಬೇಕಿದೆ. ಇದೇ ತಿಂಗಳ 27ರಂದು ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಷ್ಟ್ರೀಯ ಸಮಾವೇಶ ಕರೆಯಲು ನಿರ್ಧರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ.
ಈ ಎಲ್ಲಾ ಸಮಾವೇಶದಲ್ಲಿ ಮುಖ್ಯಮಂತ್ರಿ ಶೆಟ್ಟರ್, ಸಚಿವರುಗಳು, ಶಾಸಕರುಗಳು ಭಾಗವಹಿಸಲಿದ್ದಾರೆ. ಅಲ್ಲದೆ ಬಿ ಎಸ್ ಯಡಿಯೂರಪ್ಪ ಕೂಡಾ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಈ ನಡುವೆ ಯಡಿಯೂರಪ್ಪ ಪಕ್ಷ ಬಿಡುವ ಬಗ್ಗೆ ಯಾವುದೇ ನಾಯಕರು ಪ್ರತಿಕ್ರಿಯೆ ನೀಡಬಾರದು. ಎಲ್ಲಾ ಸಮಸ್ಯೆಗಳಿಗೆ ಸದ್ಯದಲ್ಲೇ ಪರಿಹಾರ ನೀಡಲಾಗುವುದು. ಹಾಗಾಗಿ ಯಾರೂ ಈ ಬಗ್ಗೆ ಹೇಳಿಕೆ ನೀಡಬಾರದೆಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ.












Click it and Unblock the Notifications