ಯಡಿಯೂರಪ್ಪ ಪಕ್ಷದಲ್ಲಿ ವಾಟಾಳ್ ಪಕ್ಷ ವಿಲೀನ!

ಟಿವಿ9 ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಹೂಗಾರ್ ಜೊತೆ ಮಾತನಾಡುತ್ತಿದ್ದ ವಾಟಾಳ್, ಮೊದಲು ಯಡಿಯೂರಪ್ಪ ಪಕ್ಷ ತೊರೆದು ಬರಲಿ. ಬಿಜೆಪಿ ತೊರೆದು ಹೊಸ ಪಕ್ಷ ರಚಿಸಿದರೆ ನಾವು ಅವರಿಗೆ ಬೆಂಬಲ ನೀಡುತ್ತೇವೆ ಅಲ್ಲದೆ ವಿಲೀನವಾಗುವ ಪರಿಸ್ಥಿತಿ ಬಂದರೆ ಅದಕ್ಕೂ ರೆಡಿ ಎಂದು ಘೋಷಿಸಿದ್ದಾರೆ.
ಯಡಿಯೂರಪ್ಪನವರು ಕಳೆದ ಒಂದು ವರ್ಷದಿಂದ ಇವತ್ತು ಬಿಜೆಪಿ ಬಿಡುತ್ತೇನೆ ನಾಳೆ ಬಿಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಈಗ ಮತ್ತೆ ಡಿಸೆಂಬರ್ 10ರ ದಿನ ನಿಗದಿ ಮಾಡಿದ್ದಾರೆ. ಅವರು ಮೊದಲು ಪಕ್ಷ ಬಿಡಲಿ ಆಮೇಲೆ ನೋಡೋಣ ಎಂದು ವಾಟಾಳ್ ವ್ಯಂಗ್ಯವಾಡಿದ್ದಾರೆ.
ಕೆಲವೊಂದು ಸಮಸ್ಯೆಗಳನ್ನು ನಾವು ಸದನದಲ್ಲೇ ಮಾತನಾಡಬೇಕಾಗುತ್ತೆ. ಎಲ್ಲಾ ಪಕ್ಷದವರಿಗೂ ನನ್ನನ್ನು ವಿಧಾನಪರಿಷತ್ ಗೆ ಕಳುಹಿಸಲು ಬೆಂಬಲ ನೀಡಿ ಎಂದು ಕೇಳಿಕೊಂಡೆ. ಆದರೆ ಯಾರೂ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಇದು ಬಹು ದೊಡ್ಡ ದುರಂತ ಎಂದು ವಾಟಾಳ್ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ವಾಟಾಳ್ ಅನ್ನೋದು ಒಂದು ಶಕ್ತಿ. ಈ ಶಕ್ತಿಯನ್ನು ಮಟ್ಟ ಹಾಕಲು ಯಾರಾದರೂ ಪ್ರಯತ್ನಿಸಿದರೆ ಅವರು ಭಸ್ಮವಾಗುತ್ತಾರೆ. ಚಾಮರಾಜನಗರ ನನ್ನ ಕರ್ಮಭೂಮಿ, ನಾನು ಮತ್ತೆ ಆ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಉಮೇಶ್ ಕತ್ತಿಯವರ ಪ್ರತ್ಯೇಕ ರಾಜ್ಯದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. 25 ವರ್ಷಗಳಿಂದ ಬೆಳಗಾವಿ ವಿಷಯದಲ್ಲಿ ಈ ವಾಟಾಳ್ ನಾಗರಾಜ್ ಹೋರಾಡಿದ್ದಾರೆ. ಮುಂದೇನೂ ಹೋರಾಡುತ್ತಾರೆ ಎಂದು ವಾಟಾಳ್ ಸಮಸ್ತ ಕನ್ನಡ ಜನತೆಗೆ ಭರವಸೆ ನೀಡಿದ್ದಾರೆ.
ನನಗಿನ್ನೂ 25 ವರ್ಷ ಕನ್ನಡ ಮತ್ತು ಕರ್ನಾಟಕಕ್ಕಾಗಿ ದುಡಿಯುವ ಶಕ್ತಿಯಿದೆ. ಯಾವತ್ತು ನನ್ನ ಶಕ್ತಿ ಬತ್ತುತ್ತೋ ಅಂದೇ ಪುರಭವನದ ಎದುರು ನನ್ನ ಜನ್ಮ ದಿನಾಂಕವನ್ನು ಬಹಿರಂಗ ಪಡಿಸುತ್ತೇನೆ ಎಂದು ವಾಟಾಳ್ ಲಕ್ಷ್ಮಣ್ ಹೂಗಾರ್ ಅವರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications