40 ಸಲ ರೇಪ್ ಆದ್ರೆ ದೋಷ ಯಾರದು?- ಕಾಂಗ್ರೆಸ್

ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿ, ವಿಕಟ ನಗೆ ನಕ್ಕ ಕಾಂಗ್ರೆಸ್ ವಾಲಾಗಳನ್ನು ಸಂಜೆ ವೇಳೆಗೆ ಟಿವಿಗಳ ಮುಂದೆ ಕೂತಾಗ 'ಯಾಕೆ ಹೀಗೆ ಮಾಡಿದಿರಿ?' ಎಂದು ಕೇಳಿದ್ದಕ್ಕೆ
'ಏನೋ ಆ ಅಧಿಕಾರಿಯನ್ನೇ ಕೇಳಿ, ಅಯಪ್ಪ ಈಗಾಗಲೇ ತನ್ನ 2 ದಶಕಗಳ ಸರ್ವೀಸಿನಲ್ಲಿ 40 ಬಾರಿ ಎತ್ತಂಗಡಿಯಾಗಿದ್ದಾನೆ. ಏನೋ ಆಯಪ್ಪನಲ್ಲೇ ದೋಷ ಇರಬೇಕು. ಸ್ವಲ್ಪ ಕೇಳಿ ನೋಡಿ' ಎಂದು ಕೇಳುತ್ತದೆ ಅಂದರೆ ಇವರಿನ್ನೆಂಥಾ ಮಾನಗೇಡಿಗಳಿರಬೇಕು? ಅಲ್ಲಾ 40 ಬಾರಿ ರೇಪ್ ಆದ ಮಹಿಳೆಯನ್ನು 'ಯಾಕಮ್ಮಾ ನಿನ್ಮೇಲೇ ಇಷ್ಟೊಂದು ಬಾರಿ ರೇಪ್ ಮಾಡಿದ್ದಾರೆ' ಎಂದು ಕೇಳಿದರೆ ಆಕೆಗೆ ಹೇಗಾಗಬೇಡ?
ಸಾಮಾನ್ಯವಾಗಿ ಅಧಿಕಾರಸ್ಥ ರಾಜಕಾರಣಿಗಳನ್ನು ನಿಷ್ಠಾವಂತ ಅಧಿಕಾರಿಗಳು ಎದುರು ಹಾಕಿಕೊಂಡರೆ 'ನೀರು-ನೆರಳು ಇಲ್ಲದ ಜಾಗಕ್ಕೆ ಆ ಅಧಿಕಾರಿಯನ್ನು ಕೆಲವೇ ಗಂಟೆಗಳಲ್ಲಿ ವರ್ಗಾಯಿಸುವುದು ಈ ದೇಶದ ಇತಿಹಾಸದಲ್ಲಿ ಹಾಸುಹೊಕ್ಕಿದೆ. ಅಂಥಾದ್ದರಲ್ಲಿ ಅಶೋಕ ಖೇಮ್ಕಾ ಎಂಬ ಹಿರಿಯ ಪ್ರಾಮಾಣಿಕ ಐಎಎಸ್ ಅಧಿಕಾರಿ ಯಾವ ಲೆಕ್ಕಕ್ಕೆ.
ಈ ದೇಶದಲ್ಲಿ ರಾಬರ್ಟ್ ವಾದ್ರಾ ಎಂಬ ವ್ಯಕ್ತಿಯನ್ನು ಎದುರುಹಾಕಿಕೊಳ್ಳುವ ದಾರ್ಷ್ಟ್ಯ ಯಾರಿಗಿದೆ ಹೇಳಿ. ಅಂಥಾದ್ದರಲ್ಲಿ ಇವಯ್ಯ ಅಶೋಕ ಖೇಮ್ಕಾ ಆತನನ್ನು ತಡವಿಕೊಂಡರೆ ಉಳಿಗಾಲವುಂಟೇ?
ಖೇಮ್ಕಾ ಮಾಡಿದ್ದಿಷ್ಟೇ, ಇತ್ತೀಚೆಗಷ್ಟೆ ವಾದ್ರಾ ಮತ್ತು ಡಿಎಲ್ಎಫ್ ನಡುವಣ ಭೂ ಮಾರಾಟ ವ್ಯವಹಾರದಲ್ಲಿ ಭೂಮಿಯ ಬೆಲೆಯನ್ನು ಅಪಮೌಲ್ಯಗೊಳಿಸಿರುವುದಕ್ಕೆ ರದ್ದುಪಡಿಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾ ವಿರುದ್ಧದ ಭೂವ್ಯವಹಾರಗಳ ತನಿಖೆ ಕೈಗೊಂಡಿದ್ದ ಆ ಹರಿಯಾಣದ ಹಿರಿಯ ಐಎಎಸ್ ಅಧಿಕಾರಿಯನ್ನು ಸರ್ಕಾರ ರಾತೋರಾತ್ರಿ ಎತ್ತಂಗಡಿ ಮಾಡಿದೆ.
ಇದೇ ಕರ್ನಾಟಕದ ಬಿಕೆ ಹರಿಪ್ರಸಾದ ಎಂಬ ಕಾಂಗ್ರೆಸ್ ವಕ್ತಾರ 'ಇಲ್ಲ ಇಲ್ಲ, ಭ್ರಷ್ಟಾಚಾರಕ್ಕೂ ಆತನ ವರ್ಗಾವಣೆಗೂ ಸಂಬಂಧವೇ ಇಲ್ಲ. ರಾಜ್ಯ ಯಾರನ್ನು ಯಾವಾಗ ಬೇಕಾದರೂ ವರ್ಗಾವಣೆ ಮಾಡಬಹುದು' ಎಂದು 'ಕೈ'ತೊಳೆದು ಶುದ್ಧಹಸ್ತನಾಗಲು ಹವಣಿಸುತ್ತಾನೆ ಅಂದರೆ ಆ ಪಕ್ಷ ಇನ್ಯಾವ ಅಧೋಗತಿಗೆ ಇಳಿದಿದೆ. ಇರಲಿ, ಇನ್ನೂ ವಾದ್ರಾ ಮೇಲಿನ ಆರೋಪ ಸಾಬೀತಾಗಬೇಕಿದೆ. ಆಗಲೇ ಕೈಗೆ ಕಳಂಕ ಹಚ್ಚುವುದೇ ಎಂದು ಕಿಡಿಕಾರಬಹುದು. ಹಾಗಾದರೆ ವಾದ್ರಾ ಮೇಲಿನ ಆರೋಪ ಸಾಬೀತಾಗಲಿ ಬಿಡಿ, ಅಲ್ಲಿವರೆಗೂ ಐಎಎಸ್ ಅಶೋಕ ಖೇಮ್ಕಾನನ್ನೂ ವರ್ಗ ಮಾಡಬೇಡಿ!
ಮತ್ಯಾರೋ ಕಾಂಗ್ರೆಸ್ ಪ್ರಭೃತಿಗಳು ಹೇಳಿದರು. ಅಯ್ಯೋ ರಾಬರ್ಟ್ ವಾದ್ರಾ ಅಪ್ಪಟ ಖಾಸಗಿ ವ್ಯಕ್ತಿ. ಅಂಥದ್ದರಲ್ಲಿ ಆತ ಭ್ರಷ್ಟಾಚಾರ ಮಾಡಿದ್ದಾನೆ ಅಂದರೆ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಯಾಕೆ ಎಳೆದುತರುತ್ತೀರಿ ಎಂದು ಕೇಳಿದ್ದಾರೆ. ರಾಬರ್ಟ್ ವಾದ್ರಾ ಒಬ್ಬ ಖಾಸಗಿ ವ್ಯಕ್ತಿ ಎನ್ನುವ ಮೂಲಕ ಕಾಂಗ್ರೆಸ್ ಯಾರ ಕಿವಿಯ ಮೇಲೆ ಲಾಲ್ ಬಾಗ್ ಅನ್ನು ಎತ್ತಿಡುತ್ತಿದೆ?
ಪಕ್ಷದಲ್ಲಿ ಇನ್ನೂ ಒಬ್ಬ ವ್ಯಕ್ತಿ ಇದ್ದಾರೆ. ಸಲ್ಮಾನ್ ಖುರ್ಷಿದ್ ಅಂತ. ಈತ ಸಾಕ್ಷಾತ್ ಮಾಜಿ ರಾಷ್ಟ್ರಪತಿ ಜಾಕೀರ್ ಹುಸೇನ್ ಅವರ ಮೊಮ್ಮಗ ಬೇರೆ. ಕನಿಷ್ಠ ಅದು ತನ್ನ ತಾತನ (ಜಾಕೀರ್ ಹುಸೇನ್) ಟ್ರಸ್ಟ್ ಎಂಬುದನ್ನೂ ಗೌರವಿಸದೆ ಹಣ ಮಾಡುವ ಧಾವಂತದಲ್ಲಿ ಕೋಟ್ಯಂತರ ರೂಪಾಯಿ ತಿನ್ನುತ್ತಾನೆ ಮತ್ತು ಅದನ್ನು ದಕ್ಕಿಸಿಕೊಳ್ಳಲು ವಿವೇಚನೆ ಕಳೆದುಕೊಂಡು ಮಾಧ್ಯಮದ ಮೇಲೆ ನೂರಾರು ಕೋಟಿ ರೂ. ಮಾನನಷ್ಟ (?) ಮೊಕದ್ದಮೆ ಹಾಕುತ್ತಾನೆ ಅಂದರೆ...
ಇದನ್ನು ಸಮರ್ಥಿಸಿಕೊಂಡು ಮತ್ತೊಬ್ಬ ಕೇಂದ್ರ ಸಚಿವ ಹೇಳುತ್ತಾನೆ. ಅಯ್ಯೋ ಬರೀ 77 ಲಕ್ಷ ಅಷ್ಟೇ ಅಲ್ವಾ? ಕೇಂದ್ರ ಸಚಿವನಾಗಿ ಖುರ್ಷಿದ್ ಗೆ ಅಷ್ಟೂ ತಿನ್ನುವ ಸ್ವಾತಂತ್ರ್ಯವಿಲ್ಲ ಅಂದರೆ ಹೇಗೇರಿ ಎಂದು ಕೇಳುತ್ತಾನೆ ಅಂದರೆ... ಯಾವ 'ಬೇನಿ' ಬಂದಿದೆ ಈ ಮಂದಿಗೆ?
ಇಷ್ಟಕ್ಕೂ ಅಶೋಕ ಖೇಮ್ಕಾ Indian Administrative Serviceಗೆ ಆಯ್ಕೆಯಾಗಿದ್ದುದು. Indian Adjustable Serviceಗೆ ಅಲ್ಲ, ಅಲ್ವೇ!?












Click it and Unblock the Notifications