ಬಿಜೆಪಿ vs ಬಿಜೆಪಿ : ಗಡ್ಕರಿ ಭ್ರಷ್ಟ ಎಂದ ಜೇಠ್ಮಲಾನಿ

ರಾಜಕಾರಣಿಯಾಗ ಹೊರಟಿರುವ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ ಅವರು ನಿತಿನ್ ಗಡ್ಕರಿ ವಿರುದ್ಧ ಮಾಡಿರುವ ಆರೋಪಗಳು ನಿಜವಾಗಿದೆ.
ಅವರು ಬುಧವಾರ ಸಂಜೆ ಗಡ್ಕರಿ ವಿರುದ್ಧ ಏನೇ ದಾಖಲೆ ಒದಗಿಸಲಿ ನಾನು ಅದಕ್ಕೆ ಸಮರ್ಥನೆ ನೀಡುತ್ತೇನೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮುಖಂಡನಿಗಿಂತ ಪಕ್ಷದ ತತ್ವ ಸಿದ್ಧಾಂತ ಮುಖ್ಯವಾಗುತ್ತದೆ.
ನಿತಿನ್ ಗಡ್ಕರಿ ಮಾಡಿರುವ ಆರ್ಥಿಕ ಅವ್ಯವಹಾರ ಬಗ್ಗೆ ಸೂಕ್ತ ದಾಖಲೆಗಳು ನನ್ನ ಬಳಿಯೂ ಸಾಕಷ್ಟಿದೆ ಎಂದು ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಭ್ರಷ್ಟತನದ ಆರೋಪ ಹೊತ್ತ ಮೇಲೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕೂರುವುದು ನಾಚಿಕೆಗೇಡಿನ ಸಂಗತಿ ಎಂದು ಜೇಠ್ಮಲಾನಿ ಟೀಕಿಸಿದ್ದಾರೆ.
ಸೂರಜ್ ಕುಂಡ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ ಸಂದರ್ಭದಲ್ಲಿ ಸೆಪ್ಟೆಂಬರ್ 27, 2012ರಂದು ಗಡ್ಕರಿಗೆ ಬುದ್ಧಿವಾದ ಹೇಳಿ ಜೇಠ್ಮಲಾನಿ ಅವರು ಪತ್ರ ಬರೆದಿದ್ದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದೇ ಮುಖ್ಯ ಉದ್ದೇಶ ಎಂದು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಹೇಳಿದ್ದಂತೆ ಬಿಜೆಪಿ ಪಾಲಿಸಿಕೊಂಡು ಬಂದಿತ್ತು.
ಆದರೆ, ನಿತಿನ್ ಗಡ್ಕರಿ ಅವರು 'black money is no issue' ಎಂದು ಹೇಳುವ ಮೂಲಕ ಪಕ್ಷದ ವಕ್ತಾರರಿಗೂ ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಒತ್ತು ನೀಡುವ ಅಗತ್ಯವಿಲ್ಲ ಎಂದಿದ್ದರು.
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಶರದ್ ಪವಾರ್ ಅವರೊಂದಿಗೆ ಅನೈತಿಕ ವಾಣಿಜ್ಯ ವ್ಯವಹಾರ ಹೊಂದಿದ್ದಾರೆ ಎಂದು ಭ್ರಷ್ಟಾಚಾರ ವಿರುದ್ಧ ಭಾರತ (IAC) ಕಾರ್ಯಕರ್ತೆ ಅಂಜಲಿ ದಮಾನಿಯ ಅವರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೇ ಆಧಾರದಲ್ಲಿ ಭ್ರಷ್ಟಾಚಾರ ವಿರುದ್ಧ ಭಾರತದ ಪ್ರಮುಖ ಮುಖಂಡ ಅರವಿಂದ್ ಕೇಜ್ರಿವಾಲ ಅವರು ನಿತಿನ್ ಗಡ್ಕರಿ ಅವರ ನಿಜ ಬಣ್ಣ ಬಯಲು ಮಾಡುವ ಸಾಧ್ಯತೆಯಿದೆ. ಕೇಜ್ರಿವಾಲಗೆ ರಾಮ್ ಜೇಠ್ಮಲಾನಿ ಅವರು ಬೆಂಬಲ ಸೂಚಿಸಿರುವುದು ಬಿಜೆಪಿಯಲ್ಲಿ ಇರಸು ಮುರುಸಿಗೆ ಕಾರಣವಾಗಿದೆ.












Click it and Unblock the Notifications