ಪತ್ನಿ ಆತ್ಮಹತ್ಯೆ ಕಂಡು ಸಾವಿಗೆ ಶರಣಾದ ಟೆಕ್ಕಿ

ದಕ್ಷಿಣ ಕನ್ನಡ ಜಿಲ್ಲೆ ಮೂಲದ ಈ ದಂಪತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೃತರನ್ನು 28 ವರ್ಷ ವಯಸ್ಸಿನ ಸಂದೀಪ್ ಹೆಗ್ಡೆ ಹಾಗೂ 26 ವರ್ಷದ ಸೌಮ್ಯ ಕುಮಾರಿ ಎಂದು ಗುರುತಿಸಲಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಪ್ರೊಸೆಸ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದೀಪ್ ಅವರು ಆಯುರ್ವೇದ ವೈದ್ಯೆ ಸೌಮ್ಯ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಸಂದೀಪ್ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಮೂಲದವರಾಗಿದ್ದು, ಸೌಮ್ಯ ಅವರು ಬೆಳ್ತಂಗಡಿಯ ಉಜಿರೆಯವರು ಎಂದು ತಿಳಿದು ಬಂದಿದೆ.
ಸೌಮ್ಯ ಅವರ ಆತ್ಮಹತ್ಯೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಸೌಮ್ಯ ಯಾವಾಗ ಸಾವನ್ನಪ್ಪಿದ್ದರು ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಪತ್ನಿ ಸಾವನ್ನು ಕಂಡು ಶಾಕ್ ಗೆ ಒಳಗಾಗಿ ಆತುರದಲ್ಲಿ ಪತಿ ಸಂದೀಪ್ ಕೂಡಾ ಸಾವನ್ನಪ್ಪಿರುವ ಸಾಧ್ಯತೆಯಿದೆ.
ಸಂದೀಪ್ ಕೆಲದಿನಗಳ ಮಟ್ಟಿಗೆ ಬೇರೆ ರಾಜ್ಯಕ್ಕೆ ಹೋಗಿದ್ದರು. ವಾಪಸ್ ಬಂದ ಸಂದೀಪ್ ಅವರಿಗೆ ಸೌಮ್ಯ ಮಾಡಿದ ಅಡುಗೆ ರುಚಿಸದೆ ಚೇಡಿಸಿದ್ದಾರೆ. ಇದರಿಂದ ಬೇಸರ ಗೊಂಡ ಸೌಮ್ಯ ಮರುದಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಸಾವನ್ನು ಕಂಡು ಕಂಗಾಲಾದ ಸಂದೀಪ್ ಕೂಡಾ ಮತ್ತೊಂದು ಕೋಣೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸೌಮ್ಯ ಅವರ ಪೋಷಕರು ಪ್ರತಿದಿನದಂತೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸುವಂತೆ ಕೇಳಿಕೊಂಡಿದ್ದಾರೆ. ಸೌಮ್ಯ ಅವರ ಸಂಬಂಧಿಕರು ಬಂದು ನೋಡಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾವಿನ ಕಾರಣ ನಿಗೂಢ?: ಸಂಬಾರು ಚೆನ್ನಾಗಿಲ್ಲ ಎಂದಿದ್ದಕ್ಕೆ ಸೌಮ್ಯ ಸಾವನ್ನಪ್ಪಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ದಂಪತಿಗಳ ಮಧ್ಯೆ ಸಣ್ಣ ಪುಟ್ಟ ಜಗಳ ನಡೆದರೂ ಅನ್ಯೋನ್ಯವಾಗಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ಮದುವೆಯಾಗಿ ಮೂರೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಕೊರಗು ಇರಬಹುದು ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ವಿಜಯನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications