ಚುನಾವಣೆವರೆಗೂ ಬಿಜೆಪಿಗೆ ನಾನೇ ಸಾರಥಿ: ಈಶ್ವರಪ್ಪ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮುಂದಿನ ಚುನಾವಣೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆಯಲ್ಲಿ ತಮ್ಮನ್ನೇ ಮುಂದುವರಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರಹ್ಲಾದ ಜೋಶಿ ಮತ್ತು ನಳಿನ್ಕುಮಾರ ಕಟೀಲ್ ಜತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
'ರಾಜ್ಯ ಬಿಜೆಪಿ ಒಳ್ಳೆಯ ಕೆಲಸ ಮಾಡುತ್ತಿದೆ. ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಸಂಘಟನೆಗೆ ಇನ್ನಷ್ಟು ಒತ್ತು ನೀಡಿ ಪಕ್ಷವನ್ನು ಸದೃಢವಾಗಿ ಬೆಳೆಸಿ. ಜೊತೆಗೆ ಮತ್ತೂಮ್ಮೆ ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನಿಸಿ. ಹೈಕಮಾಂಡ್ ನಿಮ್ಮೊಂದಿಗಿದೆ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ. ಹೀಗಾಗಿ ನಾವು ಸಂಘಟನೆ ಮುಂದುವರಿಸಿಕೊಂಡು ಹೋಗುತ್ತೇವೆ' ಎಂದು ಅವರು ವಿವರ ನೀಡಿದರು.
ಉಪ ಮುಖ್ಯಮಂತ್ರಿಗೆ ರೈತರು ಚಪ್ಪಲಿ ತೋರಿಸಿದ್ದೇಕೆ?:
ಮಂಗಳವಾರ ಹೊಸದಿಲ್ಲಿಯಿಂದ ನೇರವಾಗಿ ಬೀದರ್ಗೆ ಆಗಮಿಸಿದ ಈಶ್ವರಪ್ಪ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಬಳಿಕ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘದ ಮುಖಂಡ ನಿಯೋಗ ಕಬ್ಬಿನ ಬಾಕಿ ಮೊತ್ತ ಕೊಡಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭದಲ್ಲಿ 'ನೋಡೋಣ ಹೋಗ್ರಿ..ನಿಮ್ದು ಬರೀ ಇದೇ ಆಯ್ತು. ಇವತ್ತಲ್ಲ ನಾಳೆ ನಿಮ್ಮ ದುಡ್ಡು ಬರುತ್ತೆ, ಹೋಗ್ರಿ..ಹೋಗ್ರಿ.. ಎಂದು ಉಡಾಫೆ ಹೇಳಿದ್ದಾರೆ. ಇದರಿಂದ ಆಕ್ರೋಶಿತರಾದ ರೈತ ಮುಖಂಡರು ಈಶ್ವರಪ್ಪ ಕಾರಿಗೆ ಘೇರಾವ್ ಮಾಡಿದ್ದಾರೆ. ನಮಗೆ ಕೂಡಲೇ ಬಾಕಿ ಮೊತ್ತವನ್ನು ಕೊಡಿಸಬೇಕು ಎಂದು ಪಟ್ಟು ಹಿಡಿದು ರಸ್ತೆ ತಡೆ ನಡೆಸಿದ್ದಾರೆ.
ರೈತರ ಏಕಾಏಕಿ ಪ್ರತಿಭಟನೆಯಿಂದ ವಿಚಲಿತರಾದ ಉಪ ಮುಖ್ಯಮಂತ್ರಿ ಈಶ್ವರಪ್ಪ ಪೊಲೀಸರ ರಕ್ಷಣೆಯಲ್ಲಿ ಕಾರು ಹತ್ತಿ ತೆರಳಿದರು. ಪ್ರತಿ ಟನ್ ಕಬ್ಬಿಗೆ 2 ಸಾವಿರ ರೂ. ನಿಗದಿ ಮಾಡಿದ್ದು, ಕಬ್ಬಿನ ಕಾರ್ಖಾನೆಗಳು ರೈತರಿಗೆ 1,800 ರೂ. ಗಳನಷ್ಟೇ ಪಾವತಿಸಿವೆ. ಬಾಕಿ ಮೊತ್ತ, ಟನ್ ಕಬ್ಬಿಗೆ 200 ರೂ. ನೀಡಬೇಕಿದೆ ಎಂದು ಬೀದರ್ ಜಿಲ್ಲಾ ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ಬೀದರ್ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಒಟ್ಟು 30 ಕೋಟಿ ರೂ. ಗಳಷ್ಟು ಕಬ್ಬಿನ ಬಾಕಿ ಹಣ ಬರಬೇಕಿದೆ. ಸರಕಾರವೇ ಆದೇಶ ಮಾಡಿದ್ದು, ಅದನ್ನು ಕಾರ್ಖಾನೆಗಳು ರೈತರಿಗೆ ನೀಡುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದು ಕೂಡಲೇ ಬಾಕಿ ಮೊತ್ತ ನೀಡದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಮಲ್ಲಿಕಾರ್ಜುನ ಸ್ವಾಮಿ ಇದೇ ವೇಳೆ ಎಚ್ಚರಿಸಿದರು.












Click it and Unblock the Notifications