ತಲಕಾವೇರಿ: ಪಾರದರ್ಶಕ ಡ್ರೆಸ್, ತುಂಡುಡುಗೆಗೆ ಕತ್ತರಿ
ಮಡಿಕೇರಿ, ಅ.13: ತಲಕಾವೇರಿಯಲ್ಲಿ ಇದೇ ಅ. 17 ರ ಮುಂಜಾನೆ ಕಾವೇರಿ ತೀರ್ಥೋದ್ಭವವಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಮತ್ತು ದೇವಾಲಯ ವ್ಯವಸ್ಥಾಪನ ಸಮಿತಿಯು ಅನೇಕ ಕ್ರಮಗಳನ್ನು ಕೈಗೊಂಡಿದೆ.
ಶನಿವಾರದಿಂದ ಕ್ಷೇತ್ರಕ್ಕೆ ಬರುವ ಭಕ್ತರು ತುಂಡುಡುಗೆ ತೊಡುವಂತಿಲ್ಲ. ಸ್ಲೀವ್ಲೆಸ್, ಶಾರ್ಟ್ಸ್, ಪಾರದರ್ಶಕ ಬಟ್ಟೆ, ಬರ್ಮುಡಾ ತೊಟ್ಟು ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ. ಇಂಥ ಉಡುಗೆ ತೊಟ್ಟವರನ್ನು ದೇವಾಲಯ ದ್ವಾರದಲ್ಲೇ ಸೆಕ್ಯೂರಿಟಿ ಗಾರ್ಡ್ ತಡೆಯುತ್ತಾರೆ. ಹೀಗೆ ಬರುವ ಭಕ್ತರಿಗೆ ಬಟ್ಟೆ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಕಾವೇರಿ ನದಿ ಉಗಮ ಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ ದೇವಾಲಯದಲ್ಲಿ ಶುಕ್ರವಾರದಿಂದಲೇ ಈ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಭಾಗಮಂಡಲದಲ್ಲಿ ದೇವಾಲಯ ಸಮಿತಿ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತುಂಡುಡುಗೆಯಲ್ಲಿ ಬರುವ ಭಕ್ತಾದಿಗಳಿಗೆ ಬಟ್ಟೆ ಬದಲಾಯಿಸುವುದಕ್ಕೆ 2 ಕೌಂಟರ್ ಗಳನ್ನು ತೆರೆಯಲಾಗಿದೆ. ಅಲ್ಲಿ ಪುರುಷರಿಗೆ ಪಂಚೆ ಮತ್ತು ಮಹಿಳೆಯರಿಗೆ ಸೀರೆ ನೀಡಲಾಗುವುದು. ಒಂದು ವೇಳೆ ತಮ್ಮ ತುಂಡುಡುಗೆಗಳಲ್ಲೇ ಉಳಿಯ ಬಯಸುವವರು ಕನಿಷ್ಠ ಅದರ ಮೇಲೆ ಪಂಚೆ/ಸೀರೆ ಸುತ್ತಿಕೊಳ್ಳುವುದು ಕಡ್ಡಾಯ.
ಭಕ್ತರು/ಪ್ರವಾಸಿಗರು ಕನಿಷ್ಠ ವಸ್ತ್ರ ಸಂಹಿತೆ ಪಾಲಿಸಿ, ಸ್ಥಳ ಪಾವಿತ್ರ್ಯತೆ ಕಾಪಾಡಿ, ಜನರ ಭಾವನೆಗಳನ್ನು ಗೌರವಿಸಲಿ ಎಂಬುದು ಈ ಪ್ರಯತ್ನದ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಸ್ಪಷ್ಟಪಡಿಸಿದ್ದಾರೆ.