'ನೀರು ನಿಲ್ಲಿಸದಿದ್ದರೆ ಶಾಸಕರು ರಾಜೀನಾಮೆ ನೀಡಲಿ'

ಇದು ಕಾವೇರಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡ ಅವರು ಕಾವೇರಿ ಹೋರಾಟಗಾರರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೋಸ ಮಾಡಿ, ಕದ್ದುಮುಚ್ಚಿ ಕಾವೇರಿ ನೀರು ಬಿಟ್ಟಿದ್ದೇ ಆದಲ್ಲಿ ರೈತರಿಗೆ ಗೊತ್ತಾಗೇ ಗೊತ್ತಾಗುತ್ತದೆ. ಆಗ, ಮುಂದೇನು ಮಾಡಬೇಕೆಂದು ನಾವೆಲ್ಲ ನಿರ್ಧರಿಸುತ್ತೇವೆ ಎಂದು ಅವರು ರೈತರಿಗೆ ಎಲ್ಲಕ್ಕೂ ಸಿದ್ಧರಾಗಿರಬೇಕೆಂದು ಸೂಚಿಸಿದ್ದಾರೆ.
ರೈತರು ರೊಚ್ಚಿಗೆದ್ದರೆ ಕೇಂದ್ರ ಸರಕಾರವೂ ಅಷ್ಟೇ, ಸುಪ್ರೀಂ ಕೋರ್ಟ್ ಅಷ್ಟೇ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಜನರ ಹೋರಾಟದ ಮುಂದೆ ಯಾವುದೂ ಇಲ್ಲ. ಜನರ ಮುಂದೆ ಎಲ್ಲರೂ ತಲೆಬಾಗಲೇಬೇಕು ಎಂದು ಮಾದೇಗೌಡರು, ಸುಪ್ರೀಂ ಕೋರ್ಟ್ ಕರ್ನಾಟಕದ ಮರುಪರಿಶೀಲನಾ ಅರ್ಜಿಯನ್ನು ಮುಂದೂಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಈಗಲಾದರೂ ಮುಂದಾಗಲೇಬೇಕು. ಆದರೆ, ಈ ರಾಜಕಾರಣಿಗಳ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ. ತಕ್ಷಣ ನೀರು ನಿಲ್ಲಿಸುವುದು ಸಾಧ್ಯವಾಗದಿದ್ದಲ್ಲಿ ಎಲ್ಲ ಶಾಸಕರು ಮತ್ತು ಸಂಸದರು ಕೂಡಲೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಲಿ. ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಖಾರವಾಗಿ ನುಡಿದರು.
ಈಗಾಗಲೆ, 105 ಅಡಿಯ ಮಟ್ಟಕ್ಕೆ ಇಳಿದಿರುವ ಕೆಆರ್ಎಸ್ ಮತ್ತು 1 ಟಿಎಂಸಿ ನೀರನ್ನು ಮಾತ್ರ ಉಳಿಸಿಕೊಂಡಿರುವ ಕಬಿನಿ ಜಲಾಶಯದ ಬಳಿ ರೈತರು ಜಮಾಯಿಸಿದ್ದು, ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನೀರನ್ನು ನಿಲ್ಲಿಸದಿದ್ದರೆ ಪ್ರಾಣ ಕೊಟ್ಟಾದರೂ ಸರಿ ಅಣೆಕಟ್ಟೆಗಳಿಗೆ ಮುತ್ತಿಗೆ ಹಾಕುವುದಾಗಿ ರೈತರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಘೋಷಿಸಿದ್ದಾರೆ. ಸದ್ಯಕ್ಕೆ ಚೆಂಡು ರಾಜ್ಯ ಸರಕಾರದ ಅಂಗಳದಲ್ಲಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಜೀವಮಾನದ ಅತ್ಯಂತ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾರಾ?












Click it and Unblock the Notifications