ಶುಕ್ರವಾರ ಅ. 5 ಬೆಂಗಳೂರು ಬಂದ್ ಇಲ್ಲ!
ಒನ್ಇಂಡಿಯಾ ಕನ್ನಡಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡರೇ ಸ್ಪಷ್ಟಪಡಿಸಿರುವ ಸಂಗತಿಯೆಂದರೆ, ಶುಕ್ರವಾರ 'ಬೆಂಗಳೂರು ಬಂದ್'ಗೆ ಕರೆ ನೀಡಿಲ್ಲ. ಹಾಗಾಗಿ ಅ.5 ಬೆಂಗಳೂರು ಬಂದ್ ಇರುವುದಿಲ್ಲ. ನಗರದ ಎಲ್ಲ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ಸುಗಳು ಕೂಡ ಸರಾಗವಾಗಿ ಕರ್ತವ್ಯ ನಿರ್ವಹಿಸಲಿವೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ಹೋರಾಟಕ್ಕೆ ಬೆಂಗಳೂರಿನ ಜನತೆ ಸ್ಪಂದಿಸುತ್ತಿಲ್ಲ, ಕಾವೇರಿ ನೀರು ಪ್ರತಿದಿನ ಕುಡಿಯುತ್ತಿದ್ದರೂ ತಮಗೂ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಸುಮ್ಮನಿದ್ದಾರೆ ಎಂಬುದು ಕಾವೇರಿಗಾಗಿ ರಕ್ತ ಹರಿಸಲು ಸಿದ್ಧರಾಗಿರುವ ರೈತರ ಆರೋಪ ಮತ್ತು ಆಕ್ಷೇಪ. ಇದೇ ಮಾತನ್ನು ಆಡುತ್ತಿರುವ ಕರವೇ ಅಧ್ಯಕ್ಷ ನಾರಾಯಣ ಗೌಡರು ಕೂಡ, ಈ ಮೆರವಣಿಗೆಯ ಮುಖಾಂತರ ಬೆಂಗಳೂರಿನ ವಾಸಿಗಳಿಗೆ ಚುರುಕು ಮುಟ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಕ್ತದಲ್ಲಿ ಕಾವೇರಿ ಹರಿಯುತ್ತಿದ್ದರೆ... : ಮೆರವಣಿಗೆ ಬೆಳಿಗ್ಗೆ 10.30ರಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಆರಂಭವಾಗಿ ಮಧ್ಯಾಹ್ನದ ಹೊತ್ತಿಗೆ ರಾಜಭವನವನ್ನು ತಲುಪಲಿದೆ. ಈ ಮೆರವಣಿಗೆಯಲ್ಲಿ 25ರಿಂದ 30 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ನಾರಾಯಣ ಗೌಡರು ಹೇಳಿದ್ದಾರೆ. ನಿಮ್ಮ ರಕ್ತದಲ್ಲಿಯೂ ಕಾವೇರಿ ಹರಿಯುವುದು ನಿಜವೇ ಆದರೆ ಈ ಮೆರವಣಿಗೆಯಲ್ಲಿ ಭಾಗವಹಿಸಿ, ಕಾವೇರಿ ಹೋರಾಟಗಾರರ ಜೊತೆ ನಾವೂ ಇದ್ದೀವಿ ಎಂದು ತೋರಿಸಿ ಎಂದು ಬೆಂಗಳೂರಿನ ಜನತೆಗೆ ನಾರಾಯಣ ಗೌಡರು ಕರೆ ನೀಡಿದ್ದಾರೆ.
ಮೆರವಣಿಗೆ ನ್ಯಾಷನಲ್ ಕಾಲೇಜು ಮೈದಾನದಿಂದ, ಸಜ್ಜನ್ ರಾವ್ ವೃತ್ತ, ಜೆಸಿ ರಸ್ತೆ, ಟೌನ್ ಹಾಲ್, ಕಾಪೋರೇಷನ್ ವೃತ್ತ, ಮೈಸೂರು ಬ್ಯಾಂಕ್, ಏಟ್ರಿಯಾ ಹೋಟೆಲ್ ಮಾಗದಲ್ಲಿ ಸಾಗಲಿದ್ದರೂ, ಕರವೇ ಕಾರ್ಯಕರ್ತರು ನಗರದ ಉದ್ದಗಲಕ್ಕೂ ಸಂಚರಿಸಿ ಜನರನ್ನು ಭಾಗವಹಿಸಲು ಉತ್ತೇಜಿಸಲಿದ್ದಾರೆ. ಮೆರವಣಿಗೆಯ ಹಾದಿಯಲ್ಲಿರುವ ಕೆಲ ಶಾಲೆಗಳು ಈಗಾಗಲೆ ಮಕ್ಕಳಿಗೆ ರಜಾ ಘೋಷಿಸಿವೆ. ಆದರೆ, ಅಧಿಕೃತವಾಗಿ ಶಾಲೆಗಳಿಗೆ ರಜಾ ನೀಡಿಲ್ಲ. ಕಾಲೇಜು ವಿದ್ಯಾರ್ಥಿಗಳು ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದರಿಂದ ಕಾಲೇಜುಗಳಿಗೆ ರಜಾ ನೀಡಿಲ್ಲ.
ಕೆಎಸ್ಆರ್ಟಿಸ್ ಬಸ್ ಕ್ಯಾನ್ಸಲ್ : ಶನಿವಾರ ಅ.6ರಂದು ಕರ್ನಾಟಕ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ತಮಿಳುನಾಡಿಗೆ ತೆರಳಲಿರುವ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರದ್ದುಗೊಳಿಸಿದೆ. ಕರ್ನಾಟಕ ಬಂದ್ಗೆ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಗಳು ಕೂಡ ಬೆಂಬಲ ಸೂಚಿಸಿವೆ. ಹೀಗಾಗಿ, ಬಸ್ ಸಂಚಾರದಲ್ಲಿ ಶನಿವಾರ ಭಾರೀ ವ್ಯತ್ಯಯವಾಗುವ ಸಾಧ್ಯತೆಯಿದೆ. ಊರಿಂದೂರಿಗೆ ಸಂಚರಿಸುವ ಜನರು ಇದನ್ನು ಈಗಲೇ ಗಮನಿಸಬೇಕಾಗಿ ಕೋರಿಕೆ.
ಶುಕ್ರವಾರ ಬಂದ್ ಘೋಷಿಸಲಾಗಿರದಿದ್ದರೂ ಕರವೇ ಕಾರ್ಯಕರ್ತರು ನಗರದ ಉದ್ದಕ್ಕೂ ಸಂಚರಿಸಿ ಜನರನ್ನು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಘೋಷಿತ ಬಂದ್ ಆಗುವ ಸಾಧ್ಯತೆಯೂ ಇದೆ. ಒಂದು ವೇಳೆ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ಕಚೇರಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಹೋಗುವುದೇ ಆದಲ್ಲಿ ಮೆರವಣಿಗೆ ಸಾಗುವ ದಾರಿಯಲ್ಲಿ ಸಾಗದಿರುವುದು ಉತ್ತಮ. ಹಾಗೆಯೆ, ಪ್ರಾಂಶುಪಾಲರ ಅನುಮತಿ ಪಡೆದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ, ತಾವೂ ಕಾವೇರಿ ಹೋರಾಟದ ಪರವಾಗಿ ಇದ್ದೇವೆ ಎಂದು ಸಾಬೀತುಪಡಿಸಬಹುದು.