ಇದು ಸತ್ಯ: ಇನ್ನೆರೆಡು ದಿನಗಳಲ್ಲಿ ಕಬಿನಿ ಜಲಾಶಯ ಬರಿದು
ಎಚ್ ಡಿ ಕೋಟೆ, ಅ 3: ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿದಿನ 5000 ಸಾವಿರ ಕ್ಯೂಸೆಕ್ಸ್ ನೀರು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿದು ಹೋಗುತ್ತಿದೆ.

ಇನ್ನೆರೆಡು ದಿನಗಳಲ್ಲಿ ನೀರಿನ ಪ್ರಮಾಣ ಇದೇ ರೀತಿ ಹರಿದು ಹೋಗುತ್ತಿದ್ದರೆ ಕಬಿನಿ ಜಲಾಶಯ ಬರಿದಾಗಲಿದೆ ಎನ್ನುವ ಸತ್ಯ ಹೊರಬಿದ್ದಿದೆ.
ಜಲಾಶಯದ ಎತ್ತರ: 2284 ಅಡಿ
ನೀರು ಶೇಖರಿಸಬಹುದಾದ ಒಟ್ಟು ಎತ್ತರ: 2269 ಅಡಿ
ಇದುವರೆಗೆ ಹರಿದುಬಂದ ನೀರು: 19.5 ಟಿಎಂಸಿ
ಇದುವರೆಗೆ ಹರಿದು ಹೋಗಿರುವ ನೀರು: 15.5 ಟಿಎಂಸಿ
ಬಾಕಿ ಉಳಿದಿರುವ ನೀರು: 4.5 ಟಿಎಂಸಿ
ಡೆಡ್ ಸ್ಟೋರೇಜ್ ನೀರು: 2.5 ಟಿಎಂಸಿ
ಬಳಸ ಬಹುದಾದ ನೀರು: 2 ಟಿಎಂಸಿ
ಜಲಾಶಯದಲ್ಲಿ ಈಗ ಒಟ್ಟು ನಾಲ್ಕೂವರೆ ಟಿಎಂಸಿ ನೀರಿದ್ದರೂ, ಡೆಡ್ ಸ್ಟೋರೇಜ್ ನಲ್ಲಿರುವ ಎರಡೂವರೆ ಟಿಎಂಸಿ ನೀರನ್ನು ಪಂಪ್ ಮಾಡಿ ತೆಗೆಯ ಬೇಕಾಗುತ್ತದೆ. ಪಂಪ್ ಮಾಡಿ ತೆಗೆದರೆ ಜಲಾಶಯಕ್ಕೂ ಸ್ವಲ್ಪ ಮಟ್ಟಿನ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಮಾರು ಒಂದು ಲಕ್ಷದ ಏಳು ಸಾವಿರ ಕೃಷಿ ಭೂಮಿಗಳು ಕಬಿನಿ ಜಲಾಶಯವನ್ನೇ ನಂಬಿಕೊಂಡಿವೆ. ಮೈಸೂರು ಸಂಸದ ವಿಶ್ವನಾಥ್, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಕಬಿನಿ ಜಲಾಶಯದ ಮುಂದೆ ತಮಿಳುನಾಡಿಗೆ ನೀರು ಬಿಡದಂತೆ ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿ ಕೇರಳ ರಾಜ್ಯದ ವಾಯನಾಡ್ ಜಿಲ್ಲೆಯಲ್ಲಿ ಪನಮರಂ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ರಾಜ್ಯದ ಟಿ ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.
ಅಲ್ಲಿಂದ ತಮಿಳುನಾಡಿನ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. 1974 ರಲ್ಲಿ ಕಬಿನಿ ಜಲಾಶಯದ ನಿರ್ಮಾಣವಾಗಿದ್ದು, ಮೈಸೂರು ಜಿಲ್ಲೆ ಹೆಗ್ಗಡೆ ದೇವನಕೋಟೆಯ ಬೀಚನಹಳ್ಳಿ ಗ್ರಾಮದಲ್ಲಿ ಈ ಜಲಾಶಯವಿದೆ.












Click it and Unblock the Notifications