ಕನ್ನಂಬಾಡಿಕಟ್ಟೆಗೆ ಮುತ್ತಿಗೆ, ಕಾವೇರಿ ಕೊಳ್ಳದಲ್ಲಿ ಕಳವಳ

'ಕನ್ನಂಬಾಡಿ ಕಟ್ಟೆ ನಮ್ಮದು, ಹೋರಾಟ ಮಾಡದೆ ನ್ಯಾಯ ಸಿಗುವುದಿಲ್ಲ. ನಾನಿಲ್ಲದಿದ್ದರೆ ನನ್ನ ಮಕ್ಕಳು, ಮೊಮ್ಮಕ್ಕಳು,ನಮ್ಮ ರೈತಾಪಿ ಜನ ಹೋರಾಟ ನಡೆಸುತ್ತಾರೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಮುಖ್ಯಸ್ಥ ಮಾದೇಗೌಡ ಅವರು ಹೇಳಿದ್ದಾರೆ.
ಕಾವೇರಿ ವಿವಾದ ಬಗೆಹರೆದರೆ ಕುಡಿಯುವ ನೀರು, ರೈತರ ಬೆಳೆಗೆ ನೀರು, ಸಾವಿರ ಮೆಗಾ ವ್ಯಾಟ್ ವಿದ್ಯುತ್ ಎಲ್ಲವೂ ಲಭಿಸುತ್ತದೆ. ಬೆಂಗಳೂರು, ಮೈಸೂರು ನಗರವಾಸಿಗಳು ಎಚ್ಚೆತ್ತುಕೊಳ್ಳಬೇಕು. ರಾಜಕಾರಣಿಗಳು ವೋಟ್ ರಾಜಕೀಯವನ್ನು ಬಿಡಬೇಕು. ಮಾದೇಗೌಡರ ನೇತೃತ್ವದಲ್ಲಿ ಕಾವೇರಿಗಾಗಿ ನಾವು ಸಾಯಲು ಸಿದ್ಧ ಎಂದು ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಕೆಆರ್ ಎಸ್ ಗೆ ಸರ್ಪಗಾವಲು: ಕೆಆರ್ ಎಸ್ ನ ಸುತ್ತಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಪರಿಸ್ಥಿತಿ ಶಾಂತವಾಗಿದ್ದು, ನಮ್ಮ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರೀಕ್ಷೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿಶ್ವ ಒಕ್ಕಲಿಗರ ಸಂಘದ ಕಾರ್ಯಕರ್ತರು ಬೆಂಗಳೂರಿನಲ್ಲಿ ಕಾರುಗಳಲ್ಲಿ ಬೃಹತ್ ಜಾಥಾ ಹಮ್ಮಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಬೆಂಗಳೂರಿಗೆ 20ಟಿಎಂಸಿ ಬೇಕಾಗುತ್ತದೆ, ಕಾವೇರಿ ಪ್ರಾಧಿಕಾರ ತೀರ್ಪಿನ ಪ್ರಕಾರ 26 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಾಗುತ್ತದೆ. ಕೆಆರ್ ಎಸ್ ನಿಂದ 19 ಟಿಎಂಸಿ ನೀರು ಬಿಟ್ಟರೆ ಜನ ಸಾಯಬೇಕಾಗುತ್ತದೆ ಎಂದು ರೈತ ಮುಖಂಡ ರಮೇಶ್ ಅಂಕಿ ಅಂಶವನ್ನು ತೆರೆದಿಟ್ಟರು.












Click it and Unblock the Notifications