ಜಯಲಲಿತಾ ಪ್ರತಿಕೃತಿಗೆ ಚಪ್ಪಲಿ, ಗೌಡ್ರ ವಿಷಾದ

ಪ್ರತಿಭಟನೆಗಿಳಿಯುವ ಸಂಘಟನೆಗಳು ಸಭ್ಯತೆಯಿಂದ ನಡೆದುಕೊಳ್ಳಬೇಕು. ನಾವು ನಮ್ಮ ಸಂಸ್ಕೃತಿಯನ್ನು ಬಲಿಗೊಟ್ಟು ಪಡೆಯಬೇಕಾದ್ದು ಏನು ಇಲ್ಲ. ಪ್ರತಿಭಟನೆ ಅವಹೇಳನಕಾರಿ ಹೇಳಿಕೆ ಆಧಾರವಾಗಿಟ್ಟುಕೊಂಡು ಮಾನನಷ್ಟ ಮೊಕದ್ದಮೆ ಹೂಡಿ ತಮಿಳುನಾಡು ಕಾನೂನು ಹೋರಾಟಕ್ಕಿಳಿದರೆ ರಾಜ್ಯಕ್ಕೆ ಕಷ್ಟವಾಗುತ್ತದೆ ಎಂದು ದೇವೇಗೌಡ ಕಿವಿ ಮಾತು ಹೇಳಿದ್ದಾರೆ.
ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಬಹಿರಂಗ ಸತ್ಯ.ಈ ವಿವಾದವನ್ನು ತಮಿಳುನಾಡು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ದೇವೇಗೌಡ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಹಂಚಿಕೆ ವಿಷಯವನ್ನು ತಮಿಳುನಾಡು ರೈತರ ಹಿತಾಸಕ್ತಿಗಿಂತ ರಾಜಕೀಯ ಶಕ್ತಿ, ಪ್ರತಿಷ್ಠೆಯೇ ಮುಖ್ಯವಾಗಿದೆ. ಆದರೆ, ಇದು ನಮಗೆ ಜೀವನ್ಮರಣದ ಪ್ರಶ್ನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿಗಳು ತಮಿಳುನಾಡಿಗೆ ಇಂತಿಷ್ಟು ನೀರು ಹರಿಸಿ ಎಂದು ಆದೇಶ ನೀಡುವ ಮುನ್ನ, ನೀರಾವರಿ ಇಲಾಖೆಯಿಂದ ತಜ್ಞರ ಸಮಿತಿಯೊಂದನ್ನು ಕಳುಹಿಸಿ ಕರ್ನಾಟಕ- ತಮಿಳುನಾಡಿನ ಜಲಾಶಯಗಳ ನೀರಿನ ವಾಸ್ತವಾಂಶವನ್ನು ಪಡೆದುಕೊಳ್ಳಬೇಕಿತ್ತು. ಹಾಗೂ ಎರಡು ರಾಜ್ಯಗಳಲ್ಲಿನ ಬೇಸಾಯ ಪದ್ಧತಿ ಹಾಗೂ ಪ್ರಸಕ್ತ ಮುಂಗಾರಿನ ಬಗ್ಗೆ ಮಾಹಿತಿ ಇಲ್ಲದೆ ಸುಮ್ಮನೆ ಅವರು ಕೇಳಿದರು ಎಂದು ದಿನಕ್ಕಿಷ್ಟು ನೀರು ಬಿಡಿ ಎಂದು ಆದೇಶ ಮಾಡಿದರೆ ನಮ್ಮಲ್ಲಿರುವ ನೀರು ಬರಿದಾಗಲಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು.
ತಮಿಳುನಾಡು ಕೇಳಿದ್ದಕ್ಕಿಂತ ಹೆಚ್ಚಿನ ನೀರು ಹರಿಸಿದ್ದೇವೆ. ರಾಜ್ಯ ಬರದಲ್ಲಿ ತತ್ತರಿಸುತ್ತಿರುವಾಗ ತಮಿಳುನಾಡು ರಾಜಕೀಯ ಮಾಡೋದು ಸರಿಯಲ್ಲ. ನಾವು ಎಲ್ಲರೂ ಮನುಷ್ಯರೇ ಹೀಗಾಗಿ ಜಟಿಲ ಸಮಸ್ಯೆಯನ್ನು ನ್ಯಾಯಾಂಗದ ಮೂಲಕವೇ ಬಗೆಹರಿಸಿ ಕೊಳ್ಳುವುದು ಕಷ್ಟ. ವಾಸ್ತವ ಮನಗಂಡು ಎರಡೂ ಕಡೆಯವರು ಪರಸ್ಪರ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋದು ಒಳಿತು ಎಂದು ದೇವೇಗೌಡರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾವು ಪ್ರಧಾನಿಯಾಗಿದ್ದಾಗ ಉತ್ತರ ಭಾರತದ 4 ರಾಜ್ಯಗಳ ನೀರಿನ ವಿವಾದ, ಬೆಂಗಳೂರಿಗೆ 3ನೆ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಸಾಕಾರಗೊಳಿಸಿದ್ದನ್ನು ಸ್ಮರಿಸಿಕೊಂಡಿದ್ದನ್ನು ಗೌಡರು ಸ್ಮರಿಸಿಕೊಂಡರು.












Click it and Unblock the Notifications