ರಾತ್ರಿ ರೈಲಿಗೆ ಗ್ರೀನ್ ಸಿಗ್ನಲ್:ಹೆಗ್ಡೆ ಶ್ರಮಕ್ಕೆ ಸಂದ ಜಯ

ಅಂತೂ ಇಂತೂ ಕರಾವಳಿ ಭಾಗದ ಜನರ ಕೂಗಿಗೆ ರೈಲ್ವೆ ಮಂಡಳಿ ಸ್ಪಂದಿಸಿದ್ದು, ಇದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಅವಿರತ ಶ್ರಮಕ್ಕೆ ಸಂದ ಜಯ ಅಂದರೆ ತಪ್ಪಾಗಲಾರದು.
ಉಪಚುನಾವಣೆಯಲ್ಲಿ ಆಯ್ಕೆಯಾದ ನಂತರ ಪಟ್ಟು ಬಿಡದೆ ರೈಲ್ವೆ ಇಲಾಖೆ ಮೇಲೆ ನಿರಂತರ ಒತ್ತಡ ಹೇರಿ ಕಾರ್ಯ ಸಾಧಿಸುವಲ್ಲಿ ಜಯಪ್ರಕಾಶ್ ಹೆಗ್ಡೆ ಯಶಸ್ಸು ಸಾಧಿಸಿದ್ದಾರೆ.
ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಹೆಗ್ಡೆ ಉಪಚುನಾವಣೆಯ ಸಮಯದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸುವಲ್ಲಿ ಸಫಲರಾಗಿದ್ದರೆ.
ಬೆಂಗಳೂರಿನಿಂದ ಮಂಗಳೂರಿಗೆ ಈಗಿರುವ 17 ಬೋಗಿ ರೈಲು ಸಂಚಾರವನ್ನು 24 ಬೋಗಿಗೆ ಏರಿಸಲು ರೈಲ್ವೆ ಇಲಾಖೆ ಒಪ್ಪಿದೆ. ಇದರಲ್ಲಿ ಮಂಗಳೂರಿನಿಂದ 12 ಬೋಗಿಗಳು ಉಡುಪಿ, ಕಾರವಾರದತ್ತ ಉಳಿದ ಬೋಗಿಗಳು ಕಣ್ಣೂರಿನತ್ತ ಸಂಚರಿಸಲಿವೆ.
ರೈಲ್ವೆ ಇಲಾಖೆಯು ಶಿರಾಡಿ ಘಾಟ್ ನಲ್ಲಿ ಇತ್ತೀಚಿಗೆ 24 ಬೋಗಿಗಳ ಪ್ರಾಯೋಗಿಕ ರೈಲು ಸಂಚಾರ ನಡೆಸಿತ್ತು. ರೈಲ್ವೆ ಸುರಕ್ಷತಾ ವಿಭಾಗ 24 ಬೋಗಿಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿ ಇಲಾಖೆಗೆ ತನ್ನ ವರದಿ ಸಲ್ಲಿಸಿದೆ.
2007ರಲ್ಲಿ ಆರಂಭಗೊಂಡಿದ್ದ ಬೆಂಗಳೂರು - ಮಂಗಳೂರು ರಾತ್ರಿ ರೈಲನ್ನು ಕೇರಳದ ಸಂಸದರ ಮತ್ತು ಕೇಂದ್ರ ಸಚಿವರ ಒತ್ತಡದ ಮೇರೆಗೆ ಕಾರವಾರದ ಬದಲು ಕಣ್ಣೂರಿಗೆ ವಿಸ್ತರಣೆ ಮಾಡಿತ್ತು.
ಇನ್ನು ಕೆಲವೇ ವಾರಗಳಲ್ಲಿ ಬೆಂಗಳೂರಿನಿಂದ ಮಂಗಳೂರು, ಉಡುಪಿ ಮೂಲಕ ಕಾರವಾರಕ್ಕೆ ರಾತ್ರಿ ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರು, ಉಡುಪಿ ಮೂಲಕ ಕಾರವಾರಕ್ಕೆ ಹೋಗುವ ಹಗಲು ರೈಲನ್ನು ರದ್ದು ಗೊಳಿಸಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಹೈಕೋರ್ಟ್ ಸೋಮವಾರ (ಸೆ 17) ರೈಲ್ವೆ ಇಲಾಖೆಗೆ ಆದೇಶಿಸಿತ್ತು.
ಈ ಭಾಗದ ಜನತೆಯ ಬಹುದಿನದ ಕನಸು ಸಾಕಾರಗೊಳ್ಳುವುದಕ್ಕೆ ಭಗೀರಥ ಪ್ರಯತ್ನ ನಡೆಸಿದ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಜನತೆಯ ಕೂಗಿಗೆ ಸ್ಪಂದಿಸಿದ ರೈಲ್ವೆ ಇಲಾಖೆಗೆ ಕರಾವಳಿ ಜನ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications