15 ಲಕ್ಷ ಎಕರೆಯಲ್ಲಿನ ಬೆಳೆ ಭೀತಿಯಲ್ಲಿದೆ: ಜಯಲಲಿತಾ
ಸೆ.20 ರಿಂದ ಅಕ್ಟೋಬರ್ 15 ತನಕ 9 ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಬಿಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಸೂಚನೆಯನ್ನು ಕರ್ನಾಟಕ ತಿರಸ್ಕರಿಸಿರುವುದು ನಿರೀಕ್ಷಿತವಾಗಿತ್ತು. ನಾವು ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಬೇಕಾದ ಕನಿಷ್ಠ ನೀರಿನ ಪ್ರಮಾಣವನ್ನು ಕೇಳಿದ್ದೆವು ಅದೂ ಕೂಡಾ ತಕ್ಕದ್ದಂತಾಗಿದೆ.
ಕಾವೇರಿ ನದಿ ಭಾಗದ 15 ಲಕ್ಷ ಎಕರೆಗಳಲ್ಲಿ ಸಾಂಬಾ(ಭತ್ತ) ಬೆಳೆಗಳು ನೀರಿಲ್ಲದೆ ಸೊರಗಿದೆ. ಪ್ರತಿದಿನ 2 ಟಿಎಂಸಿ ಅಡಿಯಂತೆ 24 ದಿನ ಕಾವೇರಿ ನೀರು ಬಿಡುವಂತೆ ಕರ್ನಾಟಕವನ್ನು ಕೇಳಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಅಕ್ಟೋಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಮಳೆ ಸುರಿಸುವ ನಿರೀಕ್ಷೆಯಿದೆ. ಈ ಕಾಲದವರೆಗೂ ನೀರಿಲ್ಲದೆ ಬೆಳೆ ನಾಶವಾಗುವುದನ್ನು ತಪ್ಪಿಸಲು ಪ್ರತಿದಿನ 1 ಟಿಎಂಸಿಯಂತೆ 30 ದಿನದವರೆಗೂ ನೀರು ಬಿಡುವಂತೆ ಇನ್ನೊಂದು ಪ್ರಸ್ತಾಪ ಕಳಿಸಲಾಯಿತು. ಆದರೆ, ಅದಕ್ಕೆ ಕೂಡಾ ಕರ್ನಾಟಕ ಒಪ್ಪಿಕೊಳ್ಳಲಿಲ್ಲ.
ಈಗ ಪ್ರಧಾನಿ ನೇತೃತ್ವದ ಸಭೆ ಕೂಡಾ ವಿಫಲವಾಗಿದೆ. ಸೆ.21 ರಂದು ಬೆಂಗಳೂರಿನಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಎಐಎಡಿಎಂಕೆ ಪಕ್ಷ ಸಭೆಗೆ ಹಾಜರಾಗುವ ಬಗ್ಗೆ ಇನ್ನೂ ನಿರ್ಣಯ ಕೈಗೊಂಡಿಲ್ಲ ಎಂದು ಜಯಲಲಿತಾ ಹೇಳಿದರು.
ಮೆಟ್ಟೂರು ಡ್ಯಾಂನಲ್ಲಿ ಸುಮಾರು 45 ಟಿಎಂಸಿ ಅಡಿ ನೀರಿದ್ದು 30 ದಿನಗಳಿಗೆ ಮಾತ್ರ ಸಾಕಾಗುತ್ತದೆ. ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇದ್ದರೂ ಜಲಾಶಯಗಳಲ್ಲಿ ಶೇ 80 ರಷ್ಟು ನೀರಿದೆ. ನೈಋತ್ಯ ಮಾರುತಗಳಂತೆ ಈಶಾನ್ಯ ಮುಂಗಾರು ಕೂಡಾ ಕೈ ಕೊಟ್ಟರೆ ನಮ್ಮ ರೈತರು ಮಾತ್ರವಲ್ಲ, ಜನಸಾಮಾನ್ಯರು ಕೂಡಾ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಐಎಡಿಎಂಕೆ ವಕ್ತಾರರು ವಾದಿಸಿದ್ದಾರೆ.
ಹೀಗಾಗಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾವೇರಿ ನೀರು ಉಳಿಸಿಕೊಳ್ಳಲು ಹೋರಾಡುವ ಸಾಧ್ಯತೆ ನಿಚ್ಚಳವಾಗಿದೆ.