ಬಳ್ಳಾರಿ ಮರುಎಣಿಕೆ: ಜೋಳದರಾಶಿ ಶಾಂತಾಗೆ ಜಯ
ಬಳ್ಳಾರಿ, ಸೆ. 15: ಬಳ್ಳಾರಿ ನಗರ ಸಂಸದೀಯ ಕ್ಷೇತ್ರಕ್ಕೆ ನಡೆದಿದ್ದ ಮತದಾನದ ಮರುಎಣಿಕೆಯಲ್ಲಿ ಬಿಜೆಪಿಯ ಜೋಳದರಾಶಿ ಶಾಂತಾ ಭರ್ಜರಿ ಜಯ ದಾಖಲಿಸಿದ್ದಾರೆ. ಆದರೆ ಫಲಿತಾಂಶವಿನ್ನೂ ಅಧಿಕೃತವಾಗಿ ಹೈಕೋರ್ಟಿನಲ್ಲಿ ಘೋಷಣೆಯಾಗಬೇಕಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಾಂತಾ ಅವರು 'ನನ್ನ ವಿರುದ್ಧ ವೃಥಾ ಆರೋಪ ಮಾಡಿದ್ದರು. ಆದರೆ ಸತ್ಯವೆಂಬುದು ಎಂದೆಂದಿಗೂ ಒಂದೇ. ಅದನ್ನು ಬದಲಾಯಿಸಲು ಯಾರಿದಂಲೂ ಆಗದು' ಎಂದು ವಿಜಯದ ನಗೆ ಬೀರಿದ್ದಾರೆ.
'ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ' ಎಂದು ಅವಮಾನಿಸಿದ್ದರು. ಆದರೆ ಅದು ಸತ್ಯಕ್ಕೆ ದೂರ ಎಂದು 'ಪಬ್ಲಿಕ್ ಆಫ್ ಬಳ್ಳಾರಿ' ಮತ್ತೊಮ್ಮೆ ಘಂಟಾಘೋಷವಾಗಿ ಹೇಳಿದ್ದಾರೆ ಎಂದು ಶಾಂತಾ ಸಂತಸ ವ್ಯಕ್ತಪಡಿಸಿದ್ದಾರೆ. ಶಾಂತಾ ತಮ್ಮ ಆಯ್ಕೆಯನ್ನು ಖಚಿತಪಡಿಸುತ್ತಿದ್ದಂತೆ ಬಳ್ಳಾರಿಯಾದ್ಯಂತ ಅವರ ಅಭಿಮಾನಿಗಳು ಮತ್ತು ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.
ಮರು ಮತ ಎಣಿಕೆ ಫಲಿತಾಂಶ ಹೀಗಿದೆ:
ಶಾಂತಾ: 4,02,213 ಮತಗಳು
ಹನುಮಂತಪ್ಪ: 3,99,970 ಮತಗಳು
ಹತಾಶ ಹನುಮಂತಪ್ಪ: ಶಾಂತಾ ಅವರೆದುರು ಕಾಂಗ್ರೆಸ್ಸಿನ ಎನ್.ವೈ. ಹನುಮಂತಪ್ಪ ಪರಾಭವಗೊಂಡಿದ್ದಾರೆ. ಇದನ್ನು ಖುದ್ದು ಹನುಮಂತಪ್ಪ ಖಚಿತಪಡಿಸಿದ್ದು, ಮತ ಎಣಿಕೆ ಕೇಂದ್ರದಿಂದ ಹತಾಶರಾಗಿ ಹೊರನಡೆದಿದ್ದಾರೆ. ಇದರೊಂದಿಗೆ ಬಿಜೆಪಿಯ ಜೆ. ಶಾಂತಾ ಅವರು ಸಂಸದೆಯಾಗಿ ಮುಂದುವರಿಯುವುದು ಖಾತ್ರಿಯಾಗಿದೆ.
ಮೂಲಗಳ ಪ್ರಕಾರ ಎಣಿಕೆ ಕಾರ್ಯ ಎಲ್ಲವೂ ಮುಗಿದಿದ್ದು, ಚುನಾವಣಾಧಿಕಾರಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೈಕೋರ್ಟಿನಿಂದ ಅಂತಿಮ ಅನುಮೋದನೆ ಪಡೆದು ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡುವುದಷ್ಟೇ ಬಾಕಿಯಿದೆ.












Click it and Unblock the Notifications