ವೇತನ ಹೆಚ್ಚಿಸುವ ಮಾತೇ ಇಲ್ಲ; ಸಂಧಾನಕ್ಕೆ ಬನ್ನಿ
ನಿನ್ನೆ ಮಧ್ಯ ರಾತ್ರಿ ವಿಧಾನಸೌಧದಲ್ಲಿ ನಡೆದ ಮಾತುಕತೆ ಮುರಿದುಬಿದ್ದ ಬಳಿಕ ಕೆಎಸ್ಸಾರ್ಟಿಸಿ ನೌಕರರು ಇಂದು ಬೆಳಗ್ಗೆಯೂ ಮುಷ್ಕರ ಮುಂದುವರಿಸಿದ್ದರ ಪರಿಣಾಮ ಇಡೀ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ನಿಯಂತ್ರಣಕ್ಕೆ ಸಿಗದಂತಾಗಿದೆ. ಮನೆಗಳಲ್ಲಿದ್ದ ವಾಹನಗಳನ್ನು ಜನ ಹೊರಕ್ಕೆ ತಂದ ಫಲವಾಗಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಜಾಮ್ ವಿಪರೀತವಾಗಿದೆ. ಪ್ರಯಾಣಿಕರ ಪರದಾಟವಂತೂ ಹೇಳತೀರದಾಗಿದೆ.
ಪರಿಸ್ಥಿತಿ ಹೀಗೆ ಕೈಮೀರಿರುವುದನ್ನು ಮನಗಂಡ ಸಾರಿಗೆ ಸಚಿವರು ತಕ್ಷಣ ಮನಸ್ಸು ಬದಲಿಸಿ, ಕೆಎಸ್ಸಾರ್ಟಿಸಿ ನೌಕರನ್ನು ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಮಾಧ್ಯಮಗಳ ಮೂಲಕ ಈ ಆಹ್ವಾನ ನೀಡಿರುವ ಸಚಿವರು ಯಾವುದೇ ಬೇಡಿಕೆಯಿರಲಿ ಚರ್ಚಿಸಿ, ಪರಿಹರಿಸೋಣ ಎಂದಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ವೇತನ ಹೆಚ್ಚಳ ಬೇಡಿಕೆಗೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಲ್ಯಾಕ್ ಮೇಲ್ ತಂತ್ರ ಬಿಟ್ಟು ಮಾತುಕತೆಗೆ ಬನ್ನಿ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ವೇತನ ಹೆಚ್ಚಿಸಿ, ಅದರ ಹೊರೆಯನ್ನು ಪ್ರಯಾಣಿಕರ ಮೇಲೆ ಹೇರಲಾಗದು. ಇದರ ಮಧ್ಯೆ ನಿನ್ನೆ ಮಧ್ಯ ರಾತ್ರಿಯಿಂದ ಡೀಸೆಲ್ ಬೆಲೆಯೇರಿಕೆಯೂ ಆಗಿದೆ. ಇಂತಹುದರಲ್ಲಿ ವೇತನ ಹೆಚ್ಚಿಸಿ, ಸರಕಾರ ಹೊರೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಉಳಿದೆಲ್ಲ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಹರಿಸಲು ಸರಕಾರ ಬದ್ಧವಾಗಿದೆ. ತಕ್ಷಣ ಮಾತುಕತೆಗೆ ಬನ್ನಿ ಎಂದು ಅಶೋಕ್ ನೌಕರರಿಗೆ ಅಹವಾಲು ಸಲ್ಲಿಸಿದ್ದಾರೆ.