ಭಾರತೀಯರಿಗೆ ದೇವ್ರೂ ಬೇಕು, ಲಂಚಾನೂ ಬೇಕು

'ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವ ಹೊಂದಿರುವವರು. ಆದರೆ ಇಂತಹ ದೇವರ ನಾಡಿನಲ್ಲಿ ಲಂಚ-ರುಶುವತ್ತುಗಳು ರಾರಾಜಿಸುತ್ತಿರುವುದು ತುಂಬಾ ಅಸಹ್ಯಕರ' ಎಂದು ಬೌದ್ಧ ಗುರು ದಲೈ ಲಾಮಾ ಭ್ರಷ್ಟಾಚಾರದ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾಜಧಾನಿಯಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡುತ್ತಿದ್ದರು.
ಇತ್ತೀಚೆಗೆ ನಾನು ಲಡಾಕ್ ಗೆ ಭೇಟಿ ನೀಡಿದ್ದೆ. ಅಲ್ಲಿ ಯಾರೋ ಹೇಳಿದರು- ಏನೆಂದರೆ ಸರಕಾರ ಸಾಮಾಜಿಕ ಯೋಜನೆಗಾಗಿ 100 ರೂಪಾಯಿ ಬಿಡುಗಡೆ ಮಾಡಿದರೆ ಕೇವಲ 20 ರೂಪಾಯಿ ಜನರ ಕೈ ಸೇರುತ್ತದೆ. ಉಳಿದದ್ದೆಲ್ಲ ಭ್ರಷ್ಟರಿಂದ ಸ್ವಾಹಾ ಆಗುತ್ತದೆ. ಇದು ನಿಜಕ್ಕೂ ಖೇದಕರ. ಭಾರತೀಯರು ದೇವರು-ದಿಂಡ್ರು ಅನ್ನುವ ಜನ. ದೇವರಿಗೆ ಭಯಪಡುವ ಜನ ಹೀಗೇಕೆ ಮಾಡುತ್ತಾರೆ?' ಎಂದು ನೋವಿನಿಂದ ಪ್ರಶ್ನಿಸಿದರು.
ದೇವರ ಭಯ, ಜತೆಗೆ ಲಂಚದ ಮೇಲೆ ವ್ಯಾಮೋಹ: 'ಭಾರತದಲ್ಲಿ ಬಡತನ ತಾಂಡವವಾಡುತ್ತಿದೆ. ಅಂತಹುದರಲ್ಲಿ ಭ್ರಷ್ಟಾಚಾರ ಆಪೇಕ್ಷಣೀಯವಲ್ಲ. ಪ್ರತಿಯೊಬ್ಬ ಭಾರತೀಯರೂ ಈ ಬಗ್ಗೆ ಯೋಚಿಸಬೇಕು' ಎಂದು ಅವರು ನುಡಿದರು.
ಬೆಳಗ್ಗೆಯೆದ್ದು ದೇವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವ ಇದೇ ಜನ ಆ ಮೇಲೆ ಇಡೀ ದಿನ ಭ್ರಷ್ಟಾಚಾರದ ಜಪ ಮಾಡುತ್ತಾರೆ. ಹೀಗೇಕೆ. ಒಂದು ವೇಳೆ ನೀವು ದೇವರಿಲ್ಲ ಎಂದು ಹೇಳುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದರೆ ಅದೊಂದು ಥರಹ. ಆದರೆ ಅತ್ತ ದೇವರನ್ನು ಪೂಜಿಸುತ್ತಾ ಇತ್ತ ಭ್ರಷ್ಟಾಚಾರ ಮಾಡುವುದೇಕೆ? ಎಂದು ಅವರು ಪ್ರಶ್ನಿಸಿದರು.












Click it and Unblock the Notifications