ನೀರು ಹಂಚಿಕೆ : ಭುಗಿಲೆದ್ದ ಪ್ರತಿಭಟನೆ, 100 ಜನ ಸೆರೆ
ಮಂಡ್ಯದ ಕೆಆರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೆರವಣಿಗೆ ನಡೆಸಲು ಪೊಲೀಸರು ಅಡ್ಡಿ ಪಡಿಸಿದ ಕಾರಣ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಒಂದು ಬಸ್ ಹಾಗೂ ಜೀಪ್ ಜಖಂಗೊಳಿಸಲಾಗಿದೆ.
ಪ್ರತಿಭಟನೆ ಹತ್ತಿಕ್ಕಲು ಶ್ರಮಿಸುತ್ತಿರುವ ಪೊಲೀಸರು 100ಕ್ಕೂ ಅಧಿಕ ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರೆ, ಪ್ರತಿಭಟನೆ ನಿಲ್ಲುವ ಸೂಚನೆ ಮಾತ್ರ ಸಿಗುತ್ತಿಲ್ಲ.
ಮರು ಪರಿಶೀಲನೆ ಅರ್ಜಿ ಸಲ್ಲಿಸಿ: ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಸರ್ವೋಚ್ಚನ್ಯಾಯಾಲಯ ಆದೇಶಿಸಿರುವುದು ಕಾವೇರಿ ಕೊಳ್ಳದ ಜನರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.
ಕರ್ನಾಟಕದ ಪರ ವಕೀಲರು ಬರ ಪರಿಸ್ಥಿತಿಯ ಬಗ್ಗೆ ಸರಿಯಾಗಿ ಮಾಹಿತಿ ನೀಡಿ ವಾದಿಸಬೇಕಾಗಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಸರ್ಕಾರ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿ ಕೊಡಬಾರದು. ಮೊದಲು ನಮ್ಮ ರೈತರಿಗೆ ನೀರು ಕೊಡಿ, ನಮ್ಮ ರೈತರನ್ನು ಕಾಪಾಡಿ, ಇಲ್ಲದಿದ್ದರೆ 2002ರಲ್ಲಿ ನಡೆದ ಕಾವೇರಿ ಚಳವಳಿಯನ್ನು ಮತ್ತೆ ಆರಂಭಿಸಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಪು ದುರದೃಷ್ಟಕರ ಕೇಂದ್ರ ಸರ್ಕಾರವೇ ಕರ್ನಾಟಕ ರಾಜ್ಯವನ್ನು ತೀವ್ರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ.
ಕಾವೇರಿ ಕೊಳ್ಳದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರವಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಈ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರುಳಿ ತಿಳಿಸಿದ್ದಾರೆ.