10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸುಪ್ರೀಂ ಆದೇಶ
ಸುಪ್ರೀಂಕೋರ್ಟ್ ಆದೇಶದಂತೆ ಸೆ.12 ರಿಂದ ಸೆ.20 ರ ತನಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗುತ್ತದೆ. ಪ್ರಸ್ತುತ 7600 ಕ್ಯೂಸೆಕ್ಸ್ ಹರಿದು ಹೋಗುತ್ತಿದೆ.
ಸದ್ಭಾವನೆ ಅಂಗವಾಗಿ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಒಪ್ಪಿದೆ. ಮುಂದಿನ ತೀರ್ಮಾನ ಏನೇ ಇದ್ದರೂ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ಸಭೆಯಲ್ಲಿ ಬಗೆಹರಿಸಿಕೊಳ್ಳಿ ಎಂದು ಜಸ್ಟೀಸ್ ಕೆ ಜೈನ್ ಹಾಗೂ ಮದನ್ ಲೊಕುರ್ ಅವರಿದ್ದ ನ್ಯಾಯಪೀಠ ಹೇಳಿದೆ.
ತಮಿಳುನಾಡು ಅಳಲು: ಈಗಾಗಲೇ ನೀರಿನ ಪೂರೈಕೆ ಇಲ್ಲದೆ ಒಂದು ಸುತ್ತಿನ ಬೆಳೆ ನಾಶವಾಗಿದೆ. ಈಗ ಮತ್ತೊಮ್ಮೆ ಕರ್ನಾಟಕದಿಂದ ನೀರು ಸಿಗದಿದ್ದರೆ ಎರಡನೇ ಬೆಳೆ ಕೂಡಾ ನಾಶವಾಗಿ ನಷ್ಟಕ್ಕೀಡಾಗಬೇಕಾಗುತ್ತದೆ. 2012-13ರಲ್ಲಿ ಕಾವೇರಿ ಜಲನಯನ ಪ್ರದೇಶದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ.
ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಜುಲೈ 20 ರ ಮಾಹಿತಿಯಂತೆ ಸುಮಾರು 21.9 TMCft ಮಳೆ ದಾಖಲಾಗಿದೆ. ಆದರೆ, ನೀರನ್ನು ಹಂಚಿಕೆ ಮಾಡದೆ ಕರ್ನಾಟಕ ಮೋಸ ಮಾಡಿದೆ.
ನೀರು ಹಂಚುವ ಬದಲು ಜಲಾಗಾರಗಳನ್ನು ನಿರ್ಮಿಸುವುದು, ಕೃಷ್ಣರಾಜ ಸಾಗರದಿಂದ ಕೃಷಿಗಾಗಿ ನೀರು ಹರಿಸುವುದು ಮುಂತಾದ ಕಾರ್ಯದಲ್ಲಿ ಕರ್ನಾಟಕ ಮಗ್ನವಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ತಮಿಳುನಾಡು ಮನವಿ ಸಲ್ಲಿಸಿತ್ತು.
ತಮಿಳುನಾಡು ಸರ್ಕಾರ ನೀಡಿರುವ ಮಾಹಿತಿ ಸರಿಯಿಲ್ಲ. 2002ರ ತೀರ್ಪಿನ ಅನ್ವಯ ಸುಮಾರು 46 ಟಿಎಂಸಿ ಪಡೆಯುತ್ತಿದ್ದ ತಮಿಳುನಾಡು ಈಗ 22 ಟಿಎಂಸಿಗೆ ಇಳಿದಿದೆ ಎಂದು ಮಾಹಿತಿ ನೀಡಿರುವುದು ಎಷ್ಟು ಸರಿ? ಅಲ್ಲದೆ ಸಂಕಟದ ಪರಿಸ್ಥಿತಿ ಬಂದ ತಕ್ಷಣ ನೀರು ಬಿಡಬೇಕು ಎಂದು ಕಾವೇರಿ ನಿಗಾ ಸಮಿತಿ ಏನು ಹೇಳಿಲ್ಲ.
ತಮಿಳುನಾಡು ಹೇಳಿದಂತೆ ನೈಋತ್ಯ ಮುಂಗಾರು ದುರ್ಬಲವಾಗಿರುವುದರಿಂದ ನಮ್ಮ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಶೇಖರಿಸಲಾಗುತ್ತಿದೆ. ಹೆಚ್ಚಿನ ನೀರು ಇದ್ದರೆ ಬಿಡಲು ಅಡ್ಡಿಯಿಲ್ಲ ಎಂದು ಕರ್ನಾಟಕ ಸರ್ಕಾರ ಪ್ರತಿವಾದಿಸಿದೆ.
ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪಿನಿಂದ ಕರ್ನಾಟಕಕ್ಕೆ ಕೊಂಚ ಮುನ್ನಡೆ ಸಿಕ್ಕಿದ್ದರೂ, ಸೆ.19 ರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.