ಆತ್ಮಹತ್ಯಾ ನಗರಿ ಟ್ಯಾಗ್ ಬೆಂಗಳೂರಿಗೆ ಸ್ಥಿರ
ಅತ್ಯಧಿಕ ಆತ್ಮಹತ್ಯೆ ದಾಖಲಾಗಿರುವ ನಾಲ್ಕು ಪ್ರಮುಖ ನಗರಗಳ ಪೈಕಿ ಬೆಂಗಳೂರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಬೆಂಗಳೂರಿನ ಅನೇಕ ಆತ್ಮಹತ್ಯಾ ಪ್ರಕರಣಗಳು ವರದಿಯಾಗದೇ ಇರುವುದು ಪೊಲೀಸರಿಗೆ ತಲೆ ನೋವಾಗಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯಾ ಪ್ರಕರಣಗಳು ಸಂಖ್ಯೆ ಏರುಪೇರಾದರೂ ಪರಿಣಾಮ ಹಾಗೂ 'ಸೂಸೈಡ್ ಕಾಪಿಟಲ್' ಎಂಬ ಭೂತ ಮಾತ್ರ ಬೆಂಗಳೂರನ್ನು ಬಿಟ್ಟು ಇನ್ನೂ ತೊಲಗಿಲ್ಲ. [ವಾಸಿಸಲು ಅತ್ಯುತ್ತಮ ನಗರ]
ಬೆಂಗಳೂರಿನಲ್ಲಿ 2009ರಲ್ಲಿ 2,167 ಇದ್ದ ಆತ್ಮಹತ್ಯಾ ಪ್ರಕರಣಗಳು 2010ರಲ್ಲಿ 1,778, 2011 ರಲ್ಲಿ 1,717ಕ್ಕೆ ಇಳಿದಿದೆ ಎಂದು ಸಂಖ್ಯೆ ನೋಡಿ ಸಮಾಧಾನ ಪಟ್ಟಿಕೊಳ್ಳಬೇಕು ಅಷ್ಟೇ. ರಾಷ್ಟ್ರೀಯ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಮಾಹಿತಿ ಪ್ರಕಾರ ಬೆಂಗಳೂರಿನ ನಂತರ ಚೆನ್ನೈ(2438),ದೆಹಲಿ (1385), ಮುಂಬೈನಲ್ಲಿ 1162 ಪ್ರಕರಣಗಳು ದಾಖಲಾಗಿದೆ.
ಕಳೆದ ದಶಕದಲ್ಲಿ ಭಾರತದಲ್ಲಿ ಶೇ 23ರಷ್ಟು ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗಿದೆ. 2001ರಲ್ಲಿ ದೇಶದಲ್ಲಿ ಒಟ್ಟಾರೆ 108,593 ಇದ್ದ ಪ್ರಕರಣಗಳ ಸಂಖ್ಯೆ 2010ರಲ್ಲಿ 134,599 ಕ್ಕೇರಿದೆ. ದೇಶದ ಒಟ್ಟು ಆತ್ಮಹತ್ಯೆಯಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಶೇ 57.2 ರಷ್ಟು ಪಾಲು ಹೊಂದಿದೆ.
ಬೆಂಗಳೂರಿನ National Institute of Mental Health and Neurosciences(ನಿಮ್ಹಾನ್ಸ್) ಸಮೀಕ್ಷೆ ಪ್ರಕಾರ ನಗರದಲ್ಲಿ ದಾಖಲಾದ ಪ್ರಕರಣಗಳಲ್ಲಿ 10ರಿಂದ 14 ವರ್ಷ ವಯೋಮಿತಿಯೊಳಗಿನವರು ಶೇ10ರಷ್ಟಿದ್ದಾರೆ ಎಂಬುದು ಆತಂಕಕಾರಿಯಾಗಿದೆ.
ಆತ್ಮಹತ್ಯೆಗೆ ಏನು ಕಾರಣ: ಬೆಂಗಳೂರಿಗರಲ್ಲಿ ಆತ್ಮಹತ್ಯೆ ಹೆಚ್ಚಾಗಲು ನಾನಾ ಕಾರಣಗಳು ಕಂಡು ಬಂದರೂ, ಮಾನಸಿಕ ಒತ್ತಡ, ಉದ್ಯೋಗದಲ್ಲಿ ಸ್ಪರ್ಧಾತ್ಮಕತೆ, ಆರ್ಥಿಕ ಸಂಕಷ್ಟವೇ ಮೂಲ ಕಾರಣ ಎಂದು ನಿಮ್ಹಾನ್ ಹೇಳಿದೆ.
ಕುಟುಂಬಕ್ಕೆ ಸೂಚನೆಯೂ ಸಿಗದಂತೆ ಎಲ್ಲಾ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಮಾನಸಿಕ ಒತ್ತಡ ಸಹಿಸಲಾಗದೆ ಆತ್ಮಹತ್ಯ್ಗೆ ಶರಣಾಗುವವರ ಸಂಖ್ಯೆ ಶೇ 57ರಷ್ಟಿರುವುದು ಭಯ ಹುಟ್ಟಿಸುತ್ತದೆ.
ಕೆಲಸದ ಒತ್ತಡದಿಂದ ಸಂಸಾರದ ಸಣ್ಣ ಸಮಸ್ಯೆಗೆ ಪರಿಹಾರ ಸಿಗದೆ ಟೆಕ್ಕಿಗಳು ಸಾಯುತ್ತಿದ್ದರೆ, ಅಪ್ಪ ಅಮ್ಮ ಓದು ಎಂದು ಬೈದರು ಎಂಬ ಕೊರಗಿನಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವುದು ಬೆಂಗಳೂರಿನ ಪಾಲಿಗೆ ಅರಿಗಿಸಿಕೊಳ್ಳದ ದುಃಖವಾಗಿದೆ.
ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಐಟಿ ವೃತ್ತಿಪರರಲ್ಲಂತೂ ಇದು ತುಂಬಾ ಹೆಚ್ಚಾಗಿದೆ. ಸಾಮಾಜಿಕ ಹಾಗೂ ಮಾನಸಿಕ ಭದ್ರತೆ ಇಲ್ಲದೆ ಅನೇಕ ಇಂಜಿನಿಯರ್ ಗಳು, ಟೆಕ್ಕಿಗಳು, ಉನ್ನತ ವ್ಯಾಸಂಗ ಮಾಡಿದ ವಿದ್ಯಾವಂತರೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕೌನ್ಸಿಲರ್ ಮಂಜುಳಾ ರಾಮನ್ ಹೇಳಿದ್ದಾರೆ.
ಪರಿಹಾರ ಏನು?: 2002ರಲ್ಲೇ ಈ ರೀತಿ ಮಾನಸಿಕ ಒತ್ತಡ ನಿವಾರಣೆಗಾಗಿ ಆತ್ಮಹತ್ಯೆ ಯೋಚನೆ ನಿರ್ಮೂಲನೆಗಾಗಿ ಬೆಂಗಳೂರಿನಲ್ಲಿ SAHAI ಸಹಾಯವಾಣಿ ಆರಂಭಿಸಲಾಗಿದೆ. ನಿಮ್ಹಾನ್ಸ್ ಸಂಸ್ಥೆ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವ ಈ ಸಹಾಯವಾಣಿಗೆ ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಾಯಕವಾಗಿ ನಿಂತಿದೆ. SAHAI ಸಹಾಯವಾಣಿ ಇಂತಿದೆ: 080 - 25497777
ಏಕಾಂಗಿತನ, ಕೆಲಸದ ಒತ್ತಡ, ಆರ್ಥಿಕ-ಮಾನಸಿಕ ಭದ್ರತೆ, ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವತ್ತ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿಗೆ ಆತ್ಮಹತ್ಯಾ ರಾಜಧಾನಿ ಎಂಬ ಟ್ಯಾಗ್ ಆದಷ್ಟು ಬೇಗ ಕಳಚಲಿ ಎಂದು SAHAI ಸಂಸ್ಥೆ ವಕ್ತಾರರು ಆಶಿಸಿದ್ದಾರೆ. SAHAI ವೆಬ್ ತಾಣಕ್ಕೆ ಕ್ಲಿಕ್ಕಿಸಿ
ಆತ್ಮಹತ್ಯೆ ಮಹಾ ಪಾಪ ಎನ್ನುವವರು ಮಾನಸಿಕ ಒತ್ತಡಕ್ಕೆ ಸಿಲುಕಿದವರನ್ನು SAHAI ಕಚೇರಿ ಅಥವಾ ನಿಮ್ಹಾನ್ಸ್ ಗೆ ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಿದರೆ ಉತ್ತಮ.