ಸೆ12: ಶೆಟ್ಟರ್ ಉಪಸ್ಥಿತಿಯಲ್ಲಿ ರೈಲ್ವೆ ಪರಾಮರ್ಶೆ ಸಭೆ
ಕಡೂರು ರೈಲ್ವೆ ಮಾರ್ಗದಲ್ಲಿ ಬರುವ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಂದ ಸ್ಥಳಾಂತರಿಸುವ ಮುನ್ನ ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಎಚ್ಚರಿಸಿದ ಮುನಿಯಪ್ಪ ಅವರು ಇನ್ನೈದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾಕಿಯಿರುವ ಎಲ್ಲ ರೈಲ್ವೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉಪಸ್ಥಿತಿಯಲ್ಲಿ ರೈಲ್ವೆ ಪರಾಮರ್ಶೆ ಸಭೆಯೊಂದು ಇದೇ 12 ರಂದು (ಬುಧವಾರ) ನಡೆಯಲಿದೆ.
ಇದೇ ವೇಳೆ, ಚಿಕ್ಕಮಗಳೂರು-ಸಕಲೇಶಪುರ ನಡುವೆ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿಗೂ ಸರಕಾರ ಅನುಮೋದನೆ ನೀಡಿದೆ. ಆದ್ಯತೆಯ ಮೇರೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬೆಂಗಳೂರು- ಹಾಸನ ಹಾಗೂ ಕರಾವಳಿ ಜಿಲ್ಲೆಯತ್ತಲೂ ರೈಲ್ವೆ ಹಳಿ ಹಾಕಲಾಗುವುದು ಎಂದು ಅವರು ಹೇಳಿದರು.
ಭದ್ರಾವತಿ ಮತ್ತು ಶೃಂಗೇರಿ ನಡುವೆಯೂ ರೈಲ್ವೆ ಸಂಪರ್ಕ ಕಲ್ಪಿಸುವ ಬಗ್ಗೆ ಕಾರ್ಯಮಗ್ನರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮಾರ್ಗದಲ್ಲಿ ರೈಲ್ವೆ ಕಾಮಗಾರಿ ಕೈಗೆತ್ತಿಕೊಳ್ಳಲು ಪರಿಸರ ಸಚಿವಾಲಯದ ಅನುಮತಿ ಅಗತ್ಯವಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.
2025ರ ವೇಳೆಗೆ 25 ಸಾವಿರ ಕಿಮೀ ಮಾರ್ಗ ರೆಡಿ: ರಾಜ್ಯದಲ್ಲಿ 2025ರ ವೇಳೆಗೆ 25 ಸಾವಿರ ಕಿ.ಮೀ. ಹಳಿ ಮಾರ್ಗ ಅಸ್ತಿತ್ವಕ್ಕೆ ಬರಲಿದೆ. ದಾವಣಗೆರೆ, ತುಮಕೂರು, ರಾಯದುರ್ಗ, ಕೋಲಾರ, ಮುಳಬಾಗಿಲು ಭಾಗಗಳಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಲು ನಾಲ್ಕು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿಯೂ ಅವರು ಭರವಸೆ ನೀಡಿದರು.
ಬೆಂಗಳೂರು-ಮೈಸೂರು ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರು 15 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದ್ದರು. ರೈಲ್ವೆ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರಕಾರವು 80 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮುನಿಯಪ್ಪ ಇದೇ ವೇಳೆ ತಿಳಿಸಿದರು.