ಬಡವರು ಚಿನ್ನದ ಹೂಡಿಕೆ ಮಾಡೋದು ಬೇಡ: ಆರ್ಬಿಐ
ಹೇಳಿಕೇಳಿ ಬಂಗಾರಕ್ಕೆ ಈಗ ಚಿನ್ನದಂತಹ ಬೆಲೆ ಬಂದಿದೆ! ಜತೆಗೆ ದಿನೇ ದಿನೇ ಏರುತ್ತಾ ಸಾಗಿ 10 ಗ್ರಾಂಗೆ 32 ಸಾವಿರ ರೂ ಗಡಿಯನ್ನೂ ದಾಟಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ನಾವ್ಯಾಕೆ ಚಿನ್ನದ ಮೇಲೆ ಹೂಡಿಕೆ ಮಾಡಬಾರದು ಎಂಬುದರ ಬಗ್ಗೆ ನೀವು ಆಲೋಚಿಸುತ್ತಿದ್ದರೆ Reserve Bank of Indian ಉಪ ಗವರ್ನರ್ ಕೆಸಿ ಚಕ್ರವರ್ತಿ ಅವರು ನೀಡಿರುವ ಸಲಹೆಯನ್ನು ಒಮ್ಮೆ ಗಣನೆಗೆ ತೆಗೆದುಕೊಳ್ಳಿ. ಜತೆಗೆ ಚಿನ್ನದ ಬೆಲೆ ದಾಖಲೆ ಏರಿಕೆಯ ನಂತರ ಇಳಿಮುಖವಾಗುತ್ತಿರುವುದನ್ನು ಆದ್ಯವಾಗಿ ಗಮನಿಸಿ.
ಚಿನ್ನವನ್ನು ಹೂಡಿಕೆಯ ಸಾಧನವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ಬೇಡ. ಅಂದರೆ ಮುಂದೊಂದು ದಿನ ಬೆಲೆ ಜಾಸ್ತಿಯಾಗಿ ಸಕಾಲದಲ್ಲಿ ಚಿನ್ನ ನಮ್ಮ ಕೈಹಿಡಿಯುತ್ತದೆ ಎಂಬ ದೂರಾಲೋಚನೆಯಿಂದ ಹೂಡಿಕೆಗಾಗಿ ಚಿನ್ನವನ್ನು ಖರೀದಿಸಬೇಡಿ ಎಂಬುದು ಆರ್ಬಿಐ ಚಕ್ರವರ್ತಿಯ ಎಚ್ಚರಿಕೆಯ ಮಾತುಗಳು.
ಉಳ್ಳವರು ಕೊಳ್ಳುವರಯ್ಯಾ...: ಇದೀಗ ಸಾಲದ ಬಡ್ಡಿ ದರಗಳು ಕಡಿಮೆಯಾಗಿವೆ. ಹೀಗಾಗಿ ಜನ ಹೆಚ್ಚೆಚ್ಚು ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಹೂಡಿಕೆದಾರರಲ್ಲದ ಬಡ ಜನರು ಸಾಲಸೋಲ ಮಾಡಿಯಾದರೂ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅಂತಿಮವಾಗಿ ಅವರನ್ನು ಸಾಲಗಾರರನ್ನಾಗಿಯೇ ಮಾಡುತ್ತದೆ. ಇಲ್ಲವೇ ಮದುವೆ ಸಂದರ್ಭದಲ್ಲಿ ಮಗಳಿಗೆ ಉಡುಗೊರೆಯ ವಸ್ತುವಾಗಿ ಕೊಡುವುದಕ್ಕೇ ಸೀಮಿತವಾಗುತ್ತದೆ ಎಂದು ಅವರು ಬುದ್ಧಿವಾದ ಹೇಳಿದ್ದಾರೆ.
ಇದೇ ವೇಳೆ ಚಿನ್ನದ ಮೇಲೆ ಹೂಡಿಕೆಗೆ ಪ್ರೋತ್ಸಾಹಿಸುವ ಬ್ಯಾಂಕ್ಗಳ ಮೇಲೂ ಕಿಡಿಕಾರಿರುವ ಅವರು, ಚಿನ್ನವನ್ನು ಮಾರಾಟ ಮಾಡುವ ಬ್ಯಾಂಕ್ಗಳು ಅದನ್ನು ಮರಳಿ ಕೊಳ್ಳುತ್ತವೆಯೇ? ಒಂದು ವೇಳೆ ಕೊಂಡರೆ ಯಾವ ಬೆಲೆಯಲ್ಲಿ ಕೊಳ್ಳುತ್ತವೆ ಎಂದು ಪ್ರಶ್ನಿಸಿದ್ದಾರೆ.
ಗಮನಿಸಿ- ಚಿನ್ನ, ಬೆಳ್ಳಿ ಬೆಲೆ ಕುಸಿತ: ಸತತವಾಗಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಳಿಜಾರುತ್ತಿದೆ. ನವದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 390 ರೂ. ಕುಸಿದು 31,910 ರೂ. ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 1400 ರೂ. ಕುಸಿದು 59,700 ರೂ. ತಲುಪಿದೆ.