ಮೈಸೂರು ದಸರಾ ಉದ್ಘಾಟನೆಗೆ ಎಸ್ಸೆಲ್ ಭೈರಪ್ಪ ಇಲ್ಲ

ನಾಡಿನ ಹೆಮ್ಮೆಯ ನಾಡ ಹಬ್ಬವನ್ನು ಉದ್ಘಾಟಿಸುವಂತೆ ರಾಜ್ಯ ಸರ್ಕಾರ ಭೈರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಆವರು, ಪೂರ್ವನಿಗದಿತ ವಿದೇಶಿ ಪ್ರವಾಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಬಿಜಾಪುರದ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆವರಿಂದ ದಸರಾ ಉದ್ಘಾಟನೆ ಕಾರ್ಯ ನೆರವೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಮದಾಸ್ ಹೇಳಿದರು.
ಬರದ ಹಿನ್ನೆಲೆಯಲ್ಲಿ ಸರಳ ಹಾಗೂ ಸಂಪ್ರದಾಯಬದ್ಧ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ದಸರಾ ಉತ್ಸವ ಅಕ್ಟೋಬರ್ 16 ರಿಂದ 24ರವರೆಗೂ ನಡೆಯಲಿದೆ.
ರಾಜ್ಯಾದ್ಯಂತ ಬರದ ಪರಿಸ್ಥಿತಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ಬಾರಿ ಸರಳ ದಸರಾ ಆಚರಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಮೈಸೂರು, ಮಂಡ್ಯ ಪ್ರಾಂತ್ಯದ ರೈತ ಸಂಘ ಹೇಳಿದೆ.
ದಸರಾ ಆಯೋಜನಾ ಸಮಿತಿಗೆ ನೀಡುವ ಅನುದಾನದಲ್ಲಿ ಕಡಿತಗೊಳಿಸಲಾಗಿದೆ. ಈ ಬಾರಿ ಕೇವಲ 6 ಕೋಟಿ ರು ಮಾತ್ರ ಸರ್ಕಾರದಿಂದ ಸಿಗಲಿದೆ. ಆಡಂಬರದ ಆಚರಣೆಗೆ ಬ್ರೇಕ್ ಹಾಕಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತಿದೆ.
ಈ ಬಾರಿ ಪ್ರವಾಸಿಗರ ಸಂಖ್ಯೆ ಅಧಿಕವಾಗುವ ನಿರೀಕ್ಷೆಯಿದೆ. ದಸರಾ ಆಚರಣೆಯಲ್ಲಿ ಸರಳತೆ ಇದ್ದರೂ ಮೈಸೂರು ಸುತ್ತಮುತ್ತ ಪ್ರದೇಶಗಳ ವೀಕ್ಷಣೆಗೆ ಜನರು ಹಾತೊರೆಯುವುದು ಸಾಮಾನ್ಯ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಸರ್ಕಾರದೊಡನೆ ಚರ್ಚಿಸಲಾಗುವುದು ಎಂದು ಮೈಸೂರು ಟ್ರಾವೆಲ್ ಏಜೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಬಿಎಸ್ ಪ್ರಶಾಂತ್ ಅವರು ಹೇಳಿದ್ದಾರೆ.
10 ದಿನಗಳ ಸಾಂಸ್ಖೃತಿಕ ಹಬ್ಬದ ಸಂದರ್ಭದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ. ಆದರೆ, ಮುಖ್ಯಮಂತ್ರಿಗಳು ಸರಳವಾಗಿ ಹಬ್ಬ ಆಚರಿಸಲು ಸೂಚಿಸಿದ್ದಾರೆ. ಅದರೆ, ಯಾವ್ಯಾವ ಆಚರಣೆ, ಕಾರ್ಯಕ್ರಮ ರದ್ದಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.
ಬಹುಶಃ ರೈತ ದಸರಾವನ್ನು ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎ ರಾಮದಾಸ್ ಅವರೊಂದಿಗೆ ಉನ್ನತ ಮಟ್ಟ ಸಭೆ ನಡೆಸಲು ಮೈಸೂರು ನಾಗರೀಕರು, ಉದ್ಯಮಿಗಳು ನಿರ್ಧರಿಸಿದ್ದಾರೆ. ಬರದ ಪರಿಣಾಮ ಮೈಸೂರು ದಸರಾ ಸರಳವಾಗಿದ್ದರೂ ಪ್ರವಾಸಿಗರಿಗೇನೂ ಬರ ಇರುವುದಿಲ್ಲ.












Click it and Unblock the Notifications